Dec 16, 2007

ಒಂದು ಮುಂಜಾವಿನಲಿ..




ಮೋಡದ ಮರೆಯು
ಮಂಜಿನ ತೆರೆಯು
ತುಂತುರು ಮಳೆಯು
ಕಾಣನು ರವಿಯು...
ಋತುವಿನ ಹಾಡಿಗೆ
ಶೀತಲ ಭುವಿಯು..

Nov 26, 2007

ಬೆಟ್ಟದ ಮೇಲೊಂದು ಮನೆಯ ಮಾಡಿ...

ಊರಲ್ಲಿ ನಮ್ಮನೆ ಬದಿಯಲ್ಲಿ ಒಂದು ಪಾಳು ಸೈಟಿದೆ. ಆಕ್ಟುಯಲಿ, ಅಲ್ಲಿ ಮುಂಚೆ ಒಂದು ಪಾಳು ಮನೆಯಿತ್ತು. ಅದರಿಂದ ಹುಟ್ಟುವ ಬಾಡಿಗೆ ’ಅಷ್ಟಕ್ಕಷ್ಟೇ’ ಎನ್ನುವಂತಿದ್ದರಿಂದಲೋ ಏನೋ, ಅದರ ಮಾಲೀಕ ಅದರ ರಿಪೇರಿಯ ಗೋಜಿಗೆ ಹೋಗಿರಲಿಲ್ಲ. ಆ ಮನೆಯ ಕಾಂಪೌಂಡ್ ಒಳಗೆ ಕನಿಷ್ಟ ೨-೩ ಹುತ್ತಗಳಿದ್ದವು! ಅಫ್ ಕೋರ್ಸ್ ಅವುಗಳಲ್ಲಿ ಹಾವುಗಳು ಇದ್ವು. ಆಗೀಗ ರಸ್ತೆಯಲ್ಲಿ ಅಕ್ಕ ಪಕ್ಕದ ಕಾಂಪೌಂಡಿನಲ್ಲಿ ಕಾಣಿಸಿಕೊಂಡು, ಬೆಚ್ಚಿ ಬೀಳಿಸುತ್ತಿದ್ದವು. ಕೆಲವು ಕೋಲಿನ ಏಟು ತಿಂದು ಸಾಯುತ್ತಿದ್ದವು. ಆ ಮನೆ ಮಾರಲ್ಪಟ್ಟು, ಅದರ ಹೊಸ ಮಾಲೀಕ, ಮನೆಯನ್ನು ಕೆಡವಿಸಿ ಹುತ್ತಗಳನ್ನು ಒಡೆಸಿ ನೆಲಸಮ ಮಾಡಿಸಿ ಹೋದ! ಆಶ್ಚರ್ಯವೇನೆಂದರೆ ಆ ಸಮಯದಲ್ಲಿ, ಒಂದು..ಒಂದು.. ಹಾವೂ ಕಾಣಿಸಿಕೊಳ್ಳಲಿಲ್ಲ. "ಎಲ್ಲಾ ಭ್ರಮೆಯೇ" ಅಂದುಕೊಳ್ಳುವಂತೆ. ಕೆಲವರ ಪ್ರಕಾರ ಅವೆಲ್ಲ ಆಗ ಭೂಗತವಾಗಿ (ಪಾತಾಳದ ನಾಗಲೋಕಕ್ಕೆ?) ಹೊಗಿದ್ದವು. ಅಂತೂ, ಆ ಸೈಟಿನಲ್ಲಿ ಮತ್ತೆ ಗಿಡ-ಪಡ ಬೆಳೆದು ಮತ್ತೆ ’ಪಾಳು’ ಎಂದು ಕರೆಸಿಕೊಳ್ಳುವವರೆಗೂ ಯಾವ ಹಾವೂ ಕಾಣಿಸಿಕೊಂಡಿರಲಿಲ್ಲ. ಅವು "ಆ ದಿನಗಳು" ಬಿಡಿ.

ಆ ಮನೆಗೆ ಶಿಫ್ಟ್ ಆಗಿ ಆರೇಳು ವರ್ಷಗಳೇ ಆದರೂ, ನಾನಲ್ಲಿ ಇದ್ದುದು ಬಹಳ ಕಡಿಮೆ. ಎಲ್ಲ ಬರೀ ಕೇಳಿದ್ದೆನಷ್ಟೆ. ನಿನ್ನೆ ರಾತ್ರಿ ಪ್ರತ್ಯಕ್ಷವಾಗಿ ನೋಡುವಂತಾಯಿತು. ಹುಣ್ಣಿಮೆಯ ರಾತ್ರಿ(!) ಯಾವುದೋ ಕೆಟ್ಟ ಹಾವು (ಅಂದರೆ, ಸರ್ವೇಸಮಾನ್ಯವಾಗಿ, ಗಾಢ ಬಣ್ಣವುಳ್ಳದ್ದು ಎಂದರ್ಥ), ಅದ್ಯಾವ ಕಾರಣಾರ್ಥವೋ ಏನೋ, ನಮ್ಮನೆ ಕಾಂಪೌಂಡ್ ಒಳಗೆ ನುಸುಳಿ ಬಂದಿತ್ತು! ಕ್ಷಣಾರ್ಧದಲ್ಲಿ ನನ್ನ ಚಿಕ್ಕಮ್ಮ ಪೊರಕೆಯಲ್ಲಿ ಜೋರಾಗಿ ಗುಡಿಸಿ ಆಚೆ ತಳ್ಳಿಬಿಟ್ಟರು. ಎದುರಿನ ಬಯಲ ಸೊಂದಿಗಳಲ್ಲೆಲ್ಲೋ ಅದು ಮರೆಯಾಗಿಬಿಟ್ಟಿತ್ತು. ಎಲ್ಲರೂ ಹಾವು ಹೋದ ದಾರಿಯಲ್ಲೇ ದೃಷ್ಠಿಯಿಟ್ಟು ನೋಡುತ್ತಿರುವಾಗ "ಕಾಲತ್ರ ಹಾವು" ಅಂತ ಕಿರುಚಿ ಹೆದರಿಸಿದ್ದು ಯಾರಿಗೂ ಇಷ್ಟವಾಗದೆ ಬೈಸಿಕೊಂಡದ್ದಯ್ತು. ಆದರೆ ಆ ಹಾವು ಸುಮ್ಮನೆ ವಾಪಸ್ ತನ್ನ ಹುತ್ತನೋ, ಬಿಲನೋ ಸೇರ್ಕೊಳ್ಳೊದ್ ಬಿಟ್ಟು ನನ್ನ ಕಾರಿನ ಅಡಿಯಲ್ಲೇ ಮಲಗಿತ್ತು! ಊಟದ ನಂತರ ಕಾರ್ ತೆಗೆಯಲು ಡೋರಲ್ಲಿ ಕೀ ಇಡುವ ಹೊತ್ತಿಗೆ ಮೆಲ್ಲಗೆ ಹೊರಬರುತ್ತಿತ್ತು. ಎರಡಿಂಚು ಅಷ್ಟೇ.. ತುಳಿದುಬಿಡುತ್ತಿದ್ದೆ! ಪಕ್ಕದ ವಠಾರದ expert ಸೋಮಣ್ಣ ಹಾವನ್ನು ಹೊಡೆದು, ಸುಟ್ಟದ್ದು ಈಗ ಗತ. ವಿಷಯ ಕೇಳಿ ತಲ್ಲಣಿಸುವ ಮನೆಯ ಮನಗಳಿಗೆ, ಈ ಎಪಿಸೋಡು ಸೀಕ್ರೆಟ್. ಶ್ಶ್!

ಚಿಕ್ಕಪ್ಪನಂತೂ "ಇದೂ ಒಂದು ಮನೇನಾ" ಅಂತ ಗೊಣಗಿಕೊಳ್ಳುತ್ತಾರೆ. ಇದೆಲ್ಲದರಿಂದ ಬೇಸತ್ತಿದ್ದಾರೆ. ಬಹಳಷ್ಟು ಬಾರಿ ಮನೆ ಬದಲಾಯಿಸುವ ಬಗ್ಗೆ ವಿಚಾರ ನಡೆದಿದೆ. ಆದರೆ ಯಾರಿಗೂ ಇಷ್ಟ ಇಲ್ಲ. ಪಕ್ಕದ ಸೈಟಿನ ಹಾವುಗಳ ಸಂತತಿಯಲ್ಲಿ ಇದೇ ಕೊನೆಯ ಹಾವಾಗಿರಲಪ್ಪ.. ನಾಗಲೋಕದಿಂದ ಮತ್ತಿನ್ನಷ್ಟು ಜೀವಗಳು ಬರದಿರಲಿ ಅಂತ ದೇವರಲಿ ಪ್ರಾರ್ಥನೆ.

Nov 10, 2007

"ಅಣ್ಣ ಎರಡೇ ಎರ್‍ಡು"

ದೀಪದ ಬೆಳಕಿಂದ ಕಂಗೊಳಿಸಬೇಕಿದ್ದ ರಾತ್ರಿ, ಪಟಾಕಿಗಳ ಸದ್ದು ಗದ್ದಲದಿಂದ, ಹೊಗೆಯಿಂದ ತುಂಬಿತ್ತು. ಕಿಟಕಿ ಬಾಗಿಲು ಮುಚ್ಚಿ, ಹಲ್ ಕಚ್ಕೊಂಡ್ ಟಿ.ವಿ. ನೋಡ್ತಿದ್ದೆ. "ಹಚ್ಚೇವು ಕನ್ನಡದ ದೀಪ" ಹಾಡಿನ ಸಮೂಹಗಾನ ಬರ್ತಿತ್ತು. ಆಗ ಒಮ್ಮೆಗೇ...

*ಧಡೋಮ್* *ಧಡೋಮ್*

ಆ ಸದ್ದಿಗೆ ಕಿಟಕಿ ಗಾಜು ಒಡೆದು ಹೋಗೋ ಹಾಗೆ ನಡುಗಿತ್ತು. ಅವ್ನ್ ಯಾವನವ್ನು ಅಂತ ಆಚೆ ಹೋದೆ. ನಾಲ್ಕಾರು ಚಿಲ್ಟಾರಿಗಳು ಉದ್ದನೆ ಊದುಬತ್ತಿ ಹಚ್ಕೊಂಡು ದೊಡ್ ದೊಡ್ ಪಟಾಕಿ ಹೊಡಿತಿದ್ರು, ಮತಾಪೋ ಹೂವಿನ್ ಕುಂಡನೋ ಹಚ್ಚೊದ್ ಬಿಟ್ಟು.

ಮುಖ ಗಂಟ್ ಹಕ್ಕೊಂಡು ಕೇಳ್ದೆ "ಇನ್ನೂ ಎಷ್ಟಿದೆ?"
ಆಗ ಹಳದಿ ರೇಶ್ಮೆ ಲಂಗ ತೊಟ್ಟ ಪುಟ್ಟಿ - "ಅಣ್ಣ ಎರಡೇ ಎರ್‍ಡು" ಅಂದ್ಲು, ಮೂರ್ ಬೆರಳ್ ತೋರುಸ್ತಾ.. ಏನ್ ಮಾಡೂಂತಿರ?

Oct 27, 2007

ಸೆರೆಂಡಿಪಿಟಿ

ಶುಭ್ರ ಬಿಳಿ ತೊಟ್ಟಿದ್ದಳು. ಅತ್ತೆಲ್ಲೋ ನೋಡುತ್ತಿದ್ದಳು. ರೇರ್ ವ್ಯೂ ಕನ್ನಡಿಯಲ್ಲಿ ಅವಳ ಓರೆ ಮುಖ ಮಾತ್ರ ಕಂಡಿದ್ದು - ಕೆಲವೇ ಕ್ಷಣಗಳವರೆಗೆ. ಬಹಳ ಚಲಾಕುತನದಿಂದ ಟ್ರಾಫಿಕ್ ಸಂಭಾಳಿಸಿಕೊಂಡು ಸಿಗ್ನಲ್‍ನಲ್ಲಿ ಜಾರಿಕೊಂಡು ಬಿಟ್ಟಳು. ರವಿ* ಅವಳನ್ನು (ನೋಡಿದವನಂತೆ) ಹಾಡಿ ಹೊಗಳಲು ಶುರು ಮಾಡಿದ. ಇಂಥ ಚೆಲುವೆಯನ್ನ ಇಲ್ಲಿಯವರೆಗೂ ಕಂಡಿಲ್ಲ, ಹಾಗೆ ಹೀಗೆ ಅಂತೆಲ್ಲ. ನಮ್ಮೆಲ್ಲರ ಕುತೂಹಲ ಉತ್ತುಂಗದಲ್ಲಿತ್ತು. ಪ್ರದೀಪ ಆಗಲೇ ಕಾರ್ ನಂಬರ್ ಪಠಿಸುತ್ತಿದ್ದ. ಫಾಲೋ ಮಾಡಲು ನೋಡಿದೆವು. ಕಿಟಕಿಯಾಚೆ ತಲೆ ಹಾಕಿ ಒಬ್ಬೊಬ್ಬರೊಂದು ದಿಕ್ಕು ಜಾಲಾಡಿದರೂ ಎಲ್ಲೂ ಕಾಣಸಿಗಳು. ಎರೆಡು ಸಿಗ್ನಲ್‍ಗಳ ನಂತರ, ಅಚಾನಕ್ ಹಿಂದಿನಿಂದ ಬಂದು, ಸಿಗ್ನಲ್ ಜಂಪ್ ಮಾಡಿ ಬಸ್ಸು ಟ್ರಕ್ಕುಗಳ ಹಿಂದೆ ಮತ್ತೆ ಮರೆಯಾಗಿಬಿಟ್ಟಳು.

ಕಾರ್ ನಂಬರ್ ಇರುವ ಪೇಪರ್ ಇನ್ನೂ ಡ್ಯಾಶ್ ಬೋರ್ಡ್ ಮೇಲಿದೆ. ಆ ನಂಬರ್ ಎಲ್ಲರ ನಾಲಿಗೆ ತುದಿಯಲ್ಲಿದೆಯೆನ್ನುವುದು ಬೇರೆ ಮಾತು. ಅವಳು ಮತ್ತೆಂದೂ ಕಾಣಸಿಗದ ಬೆಳದಿಂಗಳ ಬಾಲೆಯೋ?

* ಹೆಸರನ್ನು ಬದಲಾಯಿಸಲಾಗಿದೆ!

Sep 19, 2007

ಬೊಗಸೆಯಲ್ಲಿ ಮಳೆ

ಹೀಗೇ ಒಮ್ಮೆ 'interesting' ಎನಿಸಿ ’ಬೊಗಸೆಯಲ್ಲಿ ಮಳೆ’ ಕೊಂಡೆ. ಹತ್ತು ಪುಟಗಳನ್ನು ಓದುವಷ್ಟರಲ್ಲಿ ನಾನು ಜಯಂತರ ಅಭಿಮಾನಿಯಾಗಿ ಹೋಗಿದ್ದೆ.

ಕವಿ-ಕೃತಿ ಪರಿಚಯದಲ್ಲಿ ಹೇಳಿರುವಂತೆ, ಪ್ರತೀವಾರ "ಹಾಯ್ ಬೆಂಗಳೂರ್" ವಾರ ಪತ್ರಿಕೆಗೆ "ಬೊಗಸೆಯಲ್ಲಿ ಮಳೆ" ಶೀರ್ಷಿಕೆಯಲ್ಲಿ ಬರೆದ ನುಡಿನೋಟಗಳ ಸಮಗ್ರ ಸಂಕಲನ ಇದು.

ಏನಿದು ನುಡಿನೋಟ? - ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಓದಿ ಸ್ವತಃ ತಿಳಿಯುವಂಥದ್ದು. ಓದಿದ ನಂತರ ’ನುಡಿನೋಟ’ ವೆಂಬುದು ಎಷ್ಟು ಸಮರ್ಪಕ ಹೆಸರೆಂದು ನಿಮಗೇ ತಿಳಿಯುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನುಡಿನೋಟವು, ದೈನಿಕ ಆಗುಹೋಗುಗಳ ಸಣ್ಣ ವಿವರಗಳಲ್ಲಿ ಜಯಂತರು ತಮ್ಮ ಅನುಭವಗಳನ್ನು ಹೆಣೆದು ಕಟ್ಟಿಕೊಡುವ ಅಭಿವ್ಯಕ್ತಿಯ ಪ್ರಯತ್ನ; ಅವರ ಸುತ್ತಣ ಜಗತ್ತಿನ ಸೂಕ್ಷ್ಮ ಸವಿವರ ಚಿತ್ರಣ, ಭಾವುಕ ಅವಲೋಕನ. ಇಲ್ಲಿ ಕಾಲ್ಪನಿಕತೆಯಿಲ್ಲ. ಪೂರ್ವಾಗ್ರಹವಿಲ್ಲ, ಉತ್ಪ್ರೇಕ್ಷೆಗಳಿಲ್ಲ.

ರವಿ ಬೆಳಗೆರೆ ಹೇಳುವಂತೆ - ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಜಯಂತರು ಹೇಳಬಲ್ಲರು. ದೇಶ ಕಾಲಗಳಲ್ಲಿ ಸಂಚರಿಸುವ, ಪರಕಾಯ ಪ್ರವೇಶ ಮಾಡುವ ಅತಿಮಾನುಷನಂತೆ, ಅವರಿಗೆ ಫುಟ್‍ಪಾತ್‍ನಲ್ಲಿ ಸಿಲ್ವರ್ ಪೈಂಟ್ ಬಳಿದುಕೊಂಡು ನಿಲ್ಲುವ ಗಾಂಧಿ ಹುಡುಗನಿಗೆ ರಾತ್ರಿ ರಾತ್ರಿ ಗಾಳಿ ತೋರುವ ಮಮತೆ ಕಾಣುತ್ತದೆ. ಆಪರೇಷನ್ ಮುನ್ನ ಸಹಿ ಮಾಡುವ ಕರಾರು ಪತ್ರದ ನಿಯಮಗಳಲ್ಲಿ ಸೂತಕ ಛಾಯೆಯಿರುವುದು ಕಾಣುತ್ತದೆ. ’ಪಿಕ್‍ಪಾಕೆಟ್’ಗೊಂಡವನ ಆತ್ಮಸಾಕ್ಷಾತ್ಕಾರ ಕಾಣುತ್ತದೆ. ಎಲ್ಲವನ್ನು ಲೇಖಕನ ಛಾಯೆಯಿರದಂತೆ third person ನಿರೂಪಣೆಯಲ್ಲಿ ಬೆಚ್ಚನೆಯ ಸ್ಪರ್ಶದೊಂದಿಗೆ ಚಿತ್ರಿಸುತ್ತಾರೆ.

ಒಟ್ಟಿನಲ್ಲಿ, ಓದಿ ಮುಗಿವಾಗ, ಪುಸ್ತಕದಲ್ಲಿ ಬೆರಳಿಟ್ಟು ಮುಚ್ಚಿ, ಒಂದು ನಿಟ್ಟುಸಿರು ಬಿಟ್ಟಿರುತ್ತೇವೆ. ಕಣ್ಣು ಮುಚ್ಚಿಯೋ, ಎಲ್ಲೋ ದಿಟ್ಟಿಸಿಯೋ, ಒಂದು ಮಂಥನಕ್ಕೆ ಸಾಗಿರುತ್ತೇವೆ.

MUST READ.

[ಕನ್ನಡ ಓದಲು ಬಾರದ ಕನ್ನಡಿಗ ಮಿತ್ರರಿಗೆ ಓದಿ ಹೇಳಲು ಸಿದ್ಧ]

Sep 10, 2007

ಸಾಕು

ನೀ ಜನಿಸುವ
ಮೇರು ಗಿರಿ ಕಾನನಗಳ
ಮಲೆನಾಡಿನವನಲ್ಲ

ಎಡೆಯಿರದ
ಜೀವಗಳೊಡಲ
ಕಡಲ ತೀರದವನಲ್ಲ

ನೀನೊಲಿದು ನಗುವ
ಬಯಲಿನವನಲ್ಲ

ಗುಡುಗೇನು
ಸಿಡಿಲೇನು
ಬರೀ ಗಾಳಿಗೆ
ಕೊಂಬೆಗಳು ತೂಗಿ
ಎಲೆಗರಿಗಳದುರಿ
"ಓ ಮಳೆಯೆ?"
ಎನಿಸಿದರೆ ಸಾಕು.

Sep 8, 2007

ಆಕ್ಸಿಡೆಂಟ್ (ಗೋಕರ್ಣದಲ್ಲಿ ವರ್ಷಾರಂಭ - ೨)

ದಿಸೆಂಬರ್ 31ರ ಬೆಳದಿಂಗಳ ರಾತ್ರಿ. ಗೋಕರ್ಣದ ಓಂ ಬೀಚಿನಿಂದ ಹಿಂತಿರುಗುವಾಗ ಸುಮಾರು ಒಂದು ಘಂಟೆ. ನಾನು ಮುಂದಿನ ಸೀಟ್‍ನಲ್ಲಿ ಕುಳಿತೆ. ಸೋಮ ಡ್ರೈವಿಂಗ್. ಸ್ವಲ್ಪ ದೂರ ಸಾಗಿದಿದಂತೆ ಕಡಲ ಭೋರ್ಗರೆತ ಕ್ರಮೇಣ ಕ್ಷೀಣಿಸಿ, ನಿಶ್ಯಬ್ಧ ಆವರಿಸಿತ್ತು. ನಿರ್ಜನ ಪ್ರದೇಶ. ಸೋಮನ ದೃಷ್ಠಿ ರಸ್ತೆಯ ಮೇಲೆ ನೆಟ್ಟಿತ್ತು. ಅವ ಹೆಚ್ಚು ಮಾತನಾಡುವವನಲ್ಲ. ಹಿಂದೆಲ್ಲರೂ ನಿದ್ರೆಗಿಳಿಯುತ್ತಿದ್ದಾರೆ. ಒಳಗೂ, ಹೊರಗೂ ಮೌನ. ಕೇಳುತ್ತಿದ್ದು ಬರೀ ಇಂಜಿನ್ ಸದ್ದು, ಕಿಟಕಿಯಿಂದ ತೂರಿಬರುತ್ತಿದ್ದ ಗಾಳಿಯ ಆರ್ಭಟ.

ದೂರದಲ್ಲಿ ಒಂದರ ಪಕ್ಕದಲ್ಲೊಂದು ಜೋಡಿಸಿದಂತೆ ಕಾಣುತ್ತಿದ್ದ ಬೆಳಕಿನ ತುಣುಕುಗಳು ಕಾಣಿಸಿದವು. ಬೆಳದಿಂಗಳಿದ್ದುದರಿಂದ ಅದು ರೈಲಿನ ಬೋಗಿಗಳ ಕಿಟಕಿಗಳೆಂದು ಗುರುತು ಹಿಡಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ರೈಲು ನಮ್ಮ ದಿಕ್ಕಿಗೆ ಲಂಬವಾಗಿ ಚಲಿಸುತ್ತಿತ್ತು. ಆಗಾಗ ತಗ್ಗುಗಳಲ್ಲಿ ಅಥವಾ ಗುಡ್ಡಗಳ ಹಿಂದೆ ಮರೆಯಾಗಿ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಮುಂದಿನ ಕ್ಷಣಕ್ಕೆ ಅದು ಹೆಚ್ಚು ಸ್ಪಷ್ಟ. (ಅದೋ.. ಅದೊಂದು ಬೋಗಿಯ ಬಾಗಿಲಲ್ಲಿ ಯಾರೋ ನಿಂತಂತಿದೆ!) ಆ ಕಂಡು ಮರೆಯಾಗುವ ಕುತೂಹಲದಲ್ಲೇ ಅದರ ಚಲನೆಯಲ್ಲೇ ದೃಷ್ಠಿಯಿಟ್ಟಿದ್ದೆ. ರೈಲು ಅದೊಮ್ಮೆ ಸೈರನ್ ಕಂಠದಲ್ಲಿ ಕೂಗಿದಾಗಲೇ ಅದೆಷ್ಟು ಹತ್ತಿರಾಗಿತ್ತೆಂದು ಅರಿವಾಗಿದ್ದು. ನಿಶ್ಯಬ್ಧದ ನಡುವೆ ಒಮ್ಮೆಗೇ ಸೀಳಿ ಬಂದ ಸದ್ದಿಗೆ ಕೆಲವರಿಗೆ ಎಚ್ಚರಾಯಿತು. ಹತ್ತಿರದಲ್ಲೇ ಮುಂದೊಂದು ಕ್ರಾಸಿಂಗ್ ಗೇಟ್ ಕಾಣ ಸಿಗಬಹುದೆಂದು ಕಣ್ಣು ಸಣ್ಣ ಮಾಡಿ ದಾರಿಯುದ್ದಕ್ಕೂ ನೋಡಿದೆ. ಉಹ್ಞೂ. ಅಂದಾಜಿನ ಪ್ರಕಾರ, ಅದೇ ವೇಗದಲ್ಲೇ ಚಲಿಸಿದರೆ, ನಮ್ಮ ಸ್ಕಾರ್ಪಿಯೋ, ರೈಲಿಗೆ ಮೂತಿಯಿಡುವುದು ಖಚಿತವಾಗಿತ್ತು. ಇನ್ನೇನು 50ಮೀ ಅಷ್ಟೇ. ಎಲ್ಲರ ದೃಷ್ಠಿ ಸೋಮನ ಮೇಲೆ. ಇನ್ನೇನು ಗಾಡಿ ನಿಲ್ಲಿಸುತ್ತಾನೆ - ಅಂತ. ಆದರೆ ಅವ ಸ್ಪೀಡ್ ಇನ್ನೂ ಹೆಚ್ಚಿಸಿದ! what the?

"ಏಯ್ ಸೋಮ"
"ಟ್ರೈನ್ ಕಣೋ ಸೋಮ"

ಹಾ.. ಅಕ್ಸಿಡೆಂಟೇನಾಗಲಿಲ್ಲ. ಜಸ್ಟ್ ಮಿಸ್ಸೂ ಅಲ್ಲ! ರೈಲು ಓವರ್ ಬ್ರಿಡ್ಜ್ ಮೇಲೆ ಹೋಗಿತ್ತು.

ಕಿರುಚಿದ್ದು ಯಾರು? ಯಾರಿಗೆ ’ಎಲ್ಲ ಗೊತ್ತಿತ್ತು’ ಯಾರಿಗೆ ’ಏನೂ ಗೊತ್ತಿರಲಿಲ್ಲ’ ಎಂಬುದು ಇನ್ನೂ ವಿವಾದದಲ್ಲಿದೆ.

Aug 25, 2007

ಬಿಳಿಗಿರೀsss... ರಂಗಯ್ಯ...

...ಅಂತ ’ಹಾಡಿ’ ಎರೆಡು ದಿನದ ಮುಂಚಿಂದ ಎಲ್ರಿಗೂ ತಲೆ ತಿಂತಾ ಇದ್ದೆ. ಶನಿವಾರ ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟ, ಭಾನುವಾರ ನವೀನನ ಮನೆ ಗೃಹಪ್ರವೇಶ(ದ ನೆಪ). ಗಿಫ್ಟ್ ಬಗ್ಗೆ ಯಾರಿಗೂ ಯೊಚನೆ ಇಲ್ಲ. ವಿಕ್ಕಿ ಮನೆಲ್ಲಿ ಟೆಂಟು; ಎನಾದ್ರೂ ಹಣ್ಣೊ, ಸ್ವೀಟ್ಸೊ ತಗೊಂಡೋಗ್ಬೇಕು ಅನ್ನೊ ಸೌಜನ್ಯ ಕೂಡ ಯಾರಿಗೂ ಇಲ್ಲ.. ಹ್ಞಾ.. ನನ್ನನ್ನೂ ಒಳಗೊಂಡು.

ಟ್ರಿಪ್ಪಿನ ಹೈಲೈಟ್ - ನಾನ್ ಕಾರ್ ಓಡ್ಸಿದ್ದು. ಹೌದು. ಫರ್ಸ್ಟ್ ಟೈಮ್; ಚೆನ್ನಾಗೇ ಓಡಿಸ್ದೆ. ಓಡಿಸ್ತಾ ಇದ್ದೆ. ಆದ್ರೆ, ಸಂಜೆ ಇದ್ದಕ್ಕಿದ್ದಂಗೆ ಮಳೆ ಬಂತು. ವೈಪರ್ ಆನ್ ಮಾಡೋದ್ ಹೇಗೇಂತ ಕೇಳ್ದೆ ಅಷ್ಟೇ.. ಈಗಿನ ಕಾಲ್ದಲ್ಲಿ ಜನ್ರಿಗೆ ನಂಬ್ಕೆ ಅನ್ನೋದೆ ಇಲ್ಲ ಬಿಡಿ. (ನನ್ನ ಡ್ರಿವಿಂಗ್ ಲೈಸೆನ್ಸ್ ಕೂಡ ತೋರಿಸ್ದೆ).

ಚಾಮರಾಜನಗರ, ಮೈಸೂರು ಜಿಲ್ಲೆಗಳ ಹಳ್ಳಿಗಾಡು ಹೊಲಗಳ ನಡುವೆ ಓಡೋ ರಸ್ತೆಯಲ್ಲಿ ಸಾಗಿದ್ದು, ಟ್ರಿಪ್ಪಿನ ಹೈಲೈಟ್. ಉದ್ದಕ್ಕೂ ಒಳ್ಳೆ ನೀರಾವರಿ ಸೌಕರ್ಯ. ಕಾವೇರಿ ನದಿ ಬೇರೆ. ನದಿ, ಇಲ್ಲವೆ ಕಾಲುವೆ, ರಸ್ತೆಗೆ ಅಡ್ಡಹಾಯುತ್ತಿದ್ದದ್ದು ಸರ್ವೇ ಸಮಾನ್ಯ ದೃಶ್ಯವಾಗಿತ್ತು. ಮಕ್ಕಳು ಸ್ಕೂಲಿನಿಂದ ವಾಪಸ್ ಬರ್ತಾ ಬ್ರಿಡ್ಜ್ ಮೂಲಕ ನದೀನ ಹಾದು ಊರಿಗೆ ಹಿಂತಿರುಗೋದ್ ನೋಡಿ ಅಸೂಯೆ ಆಯ್ತು.

ಮಳೆಗಾಲ ಬೇರೆ! ಎಲ್ರೂ ಹೊಲ ಗದ್ದೆಗಳ ಕೆಲಸದಲ್ಲಿ ಮಗ್ನ. ಕೆಲವ್ ಕಡೆ ಎತ್ತುಗಳು, ಇತ್ತ ಕಡೆ ಮಾಡರ್ನ್ ಮಷೀನ್‍ಗಳು. ಮಳೆ ಬಂದ್ರೂ ಯಾವುದೂ ನಿಲ್ಲಲ್ಲ! ಪಟ್ಟೆಗಳಲ್ಲಿ ನಿಲ್ಸಿದ ನೀರಿನ ಹಾಳೆ, ಬಿಸ್ಲಿಗೆ ಬೆಳ್ಳಗೆ ಹೊಳೆದು ಕಣ್ಣ ಕೋರೈಸ್ತಿತ್ತು. ಇಳಿಜಾರಿನ ಪ್ರದೇಶಗಳಲ್ಲಿ ಮೇಲಿನ್ ಪಟ್ಟೆಗಳಿಂದ ಕೆಳಗಿನವಕ್ಕೆ, ಸಣ್ಣ ತೂತೊಡೆದು ನಿಯಂತ್ರಿತವಾಗಿ ನೀರು ಬಿಟ್ಟಿದ್ದು - ಸಣ್ಣ ಸಣ್ಣ ಜಲಪಾತಗಳಂತೆ ಕಾಣ್ತಿದ್ವು. ನನಗೋ, ಯಾವುದೋ ಪೂರ್ವ ಜನ್ಮದ ನೆನಪಾದಂಗೆ ಆಗ್ತಾ ಇತ್ತು. ಏನಾದ್ರೂ ನಿಜ್ವಾಗ್ಲೂ ಹಿಂದಿನ್ ಜನ್ಮದಲ್ಲಿ ರೈತನಾಗಿ ಹೊಲದಲ್ಲಿ ದುಡಿತಾ ಇದ್ನಾ? ರೋಮಾಂಚನವಾಯ್ತು!

ದರ್ಶನ ಮಾಡ್ಕೊಂಡು ’ರಾಮಕೃಷ್ಣ ಕುಟೀರ’ಕ್ಕೆ ಬಂದ್ವಿ. ಸ್ವಾಮೀಜಿಗಳ ಆಶೀರ್ವಾದ ಪಡೆದು, ಅವರ ಸಲಹೆಯಂತೆ, ’ಕೆ.ಗುಡಿ’ಯ ದಾರಿ ಹಿಡಿದ್ವಿ. ಈ ದಾರಿಯಲ್ಲಿ ಕಾಡು ಇನ್ನೂ ಹೆಚ್ಚು ಒತ್ತೊತ್ತು ಹಾಗೂ ವನ್ಯಜೀವಿಗಳನ್ನ ನೋಡ್‍ಬಹುದೆಂಬುದಾಗಿ. ನಿರಾಸೆಯಾಗ್ಲಿಲ್ಲ - ಜಿಂಕೆ, ಕಾಡು ಕೋಣ, ಕರಡಿ ಮುಂತಾದವುಗಳನ್ನ ಕ್ಯಾಮೆರ ಕಣ್ಗಳಲ್ಲಿ ಸೆರೆ ಹಿಡಿದ್ವಿ. ಪ್ರದೀಪನ ಗಂಟ್ಲಿಗೆ ಹೆದ್ರಿ ಇನ್ ಕೆಲ್ವು ಓಟ ಕಿತ್ವು. ಕರಡಿಯಂತೂ ಇವ್ನ್ ಕಡೆ ನೋಡಿ ಗುರುತಿರೋ ಹಂಗೆ, ತಲೆಯಾಡ್ಸಿ ಹೋಯ್ತು.

ರಾತ್ರಿ ಮೈಸೂರಿಗೆ ವಾಪಸ್ಸಾಗೋವಾಗ ಸಿಕ್ಕಾಪಟ್ಟೆ ಮಳೆ - Just what I wanted.

Aug 17, 2007

ಜನ ಚೇಂಜ್ ಕೇಳ್ತಾರೆ!

ರಜೆ ಮೇಲೆ ಊರಿಗೋಗಿದ್ದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ತಂದೆ ಸ್ನೇಹಿತರೊಬ್ಬರು ನನ್ನನ್ನೇ ಕೇಳ್ಕೊಂಡ್ ಬಂದ್ರು. ಅವರದು ನೋಕಿಯ ಹ್ಯಾಂಡ್‍ಸೆಟ್. ಪೇಪರ್‌ನಲ್ಲಿ ಬ್ಯಾಟರಿ ಪ್ರಾಬ್ಲಮ್ ಬಗ್ಗೆ ಓದಿ, ಎಸ್ಸೆಮ್ಮೆಸ್ ಕಳ್ಸಿದ್ದಾರೆ. ರಿಪ್ಲೈ ಬಂದಿಲ್ಲ. "ಯಾಕೋ ರಿಪ್ಲೈ ಬರ್ತಾನೇ ಇಲ್ಲ, ನಮ್ ಆಫೀಸ್‍ನಲ್ಲೆಲ್ರಿಗೂ ಬಂದಿದೆ.. ಏನ್ ಮಾಡೋದು" ಅಂತ ಗಾಬರಿಯಾಗಿ ನನ್ನ ’ಎಕ್ಸ್‍ಪರ್ಟ್ ಅಡ್‍ವೈಸ್’ ಕೇಳಿದರು. "ಎಸ್ಸೆಮ್ಮೆಸ್ ಬಂದೇ ಬರುತ್ತೆ. worst case ಒಂದು ದಿನ ಆಗ್‍ಬಹುದು, ವೈಟ್ ಮಾಡಿ" ಅಂದೆ. ಅವ್ರಿಗೆ ಸಮಾಧಾನ ಆಗ್ಲಿಲ್ಲ. ಸರಿ ಅಂತ ನಾನೊಂದ್ ಸಲ ಮೆಸ್ಸೇಜ್ ಕಳಿಸ್ದೆ. ಸ್ವಲ್ಪ ಹೊತ್ತಿಗೇ ರಿಪ್ಲೈ ಬಂತು - "..you may continue to use your battery.."

ಅವ್ರಿಗೆ ತುಂಬಾ ನಿರಾಸೆ ಆಯ್ತು - "ಹೌದಾ? ಹಾಗಾದ್ರೆ ಬ್ಯಾಟರಿ ಚೇಂಜ್ ಮಾಡ್ಬೇಕಾಗಿಲ್ವ?" ಅಂತ ಸಪ್ಪಗಾದ್ರು.

ಹೌದಲ್ಲ?! ಬ್ಯಾಟರಿ ಚೇಂಜ್ ಮಾಡ್ಬೇಕು ಅಂತ ಮೆಸೇಜ್ ಬಂದಿದ್ದಿದ್ರೆ, ಸ್ವಲ್ಪ ಎಕ್ಸೈಟಿಂಗೆ ಇರ್ತಿತ್ತು. ಜನ ಚೇಂಜ್ ಕೇಳ್ತಾರೆ!

Jul 4, 2007

ಅಮೇತಿಕಲ್ ಪರ್ವತಾರೋಹಣ

ಈ ಬಾರಿ ನಾವು ಹೊರಟದ್ದು - ಧರ್ಮಸ್ಥಳದ ಹತ್ತಿರದ, ಶಿಶಿಲದ ಬಳಿಯ ಚಾರ್ಮಾಡಿ, ಶಿರಾಡಿ ಶ್ರೇಣಿಗಳ ಮದ್ಯದಲ್ಲಿರುವ ಅಮೇತಿಕಲ್ ಪರ್ವತಕ್ಕೆ.

ಶನಿವಾರ ಹತ್ತಿ, ರಾತ್ರಿ ಶಿಖರದಲ್ಲೇ ತಂಗಿ, ಮುಂಜಾನೆ ಇಳಿದು, ಸಂಜೆ ಬೆಂಗಳೂರಿಗೆ ಹಿಂದಿರುಗುವ ಪ್ಲಾನ್. ಟೆಂಟ್ ಮತ್ತು ಸ್ಲೀಪಿಂಗ್ ಬ್ಯಾಗ್‌ಗಳ ವ್ಯವಸ್ಥೆ ಬೆಂಗಳೂರಿನಿಂದಲೇ; ಮಾರ್ಗದರ್ಶನಕ್ಕಾಗಿ ಸ್ಥಳೀಯ ಗೈಡ್. ಶುಕ್ರವಾರ ರಾತ್ರಿ ಸರ್ಕಾರಿ ಬಸ್ಸಲ್ಲಿ ಪ್ರಯಾಣ.

ಕಣ್ಬಿಟ್ಟಾಗ ಮುಂಜಾನೆ ಆರು. ಆಗಲೇ ರವಿ ತನ್ನ ಪ್ರಖರತೆ ತೋರುತ್ತಿದ್ದ. ಬಸ್ಸು ಹೈವೇಯಿಂದಿಳಿದು, ರೊಯ್ಯನೆ ಕಾಡಿನ ನಡುವೆ ಏರಿ ಇಳಿದು ಸುತ್ತುತ್ತಾ ಧರ್ಮಸ್ಥಳದ ಕಡೆಗೆ ಸಾಗಿದೆ. ಸುತ್ತೆಲ್ಲ ವನಸಿರಿ - ಹಸಿರು - ಅಹ್ಲಾದಕರ ಗಾಳಿ. ಮಲೆನಾಡಿನ ಪರಿಸರದಲ್ಲಿ ಶ್ವಾಸ ಸಂಭಂಧಿಗಳಾಗಿ ಒಂದಾಗಿದ್ದೆವು.

‘ಸಾಕೇತ’ದಲ್ಲಿ ಲೋಕಲ್ ಬಾಯ್ ಪ್ರದೀಪ ಆಗಲೇ ರೋಮುಳನ್ನು ಕಾದಿರಿಸಿದ್ದ. ‘ಫ್ರೆಶ್’ ಆಗಿ ದೇವಸ್ಥಾನಕ್ಕೆ ಹೊರಟು ಸೀದಾ ಕ್ಯೂನಲ್ಲಿ ನಿಂತೆವು. ಮುಂಜಾನೆಯಾದುದರಿಂದಲೋ ಏನೋ, ಪ್ರಾಂಗಣದಲ್ಲಿ ಅಷ್ಟಾಗಿ ಹೆಚ್ಚು ಜನರಿದ್ದಂತೆ ಕಾಣಲಿಲ್ಲ. ಭಕ್ತಿಯ ವಾತಾವರಣ; ಅದರಿಂದ ಸುತ್ತೆಲ್ಲ ಒಂದು ಗಾಂಭೀರ್ಯ, ಸ್ಥಬ್ದತೆ, ಉಲ್ಲಾಸ. ಸಾಲಿನಲ್ಲಿ ನಡೆಯುವಾಗ ಅಲ್ಲಲ್ಲಿ ದೊಡ್ಡ ಪರದೆಯಲ್ಲಿ ದೇವರ ದರ್ಶನ. ನಾನಾ ಕಡೆಯಿಂದ ಬಂದಿದ್ದ ಭಕ್ತಾದಿಗಳು - ಮುದುಕರು, ಅಜ್ಜಿಯರು, ಯುವಕರು.. - ನಾನಾ ಕಷ್ಟಗಳು - ಅವನಲ್ಲಿ ಮೊರೆ. ಆ ಪ್ರಶಾಂತ ದೇಗುಲವೇ ಅವರಿಗೆ ಅಭಯ. ಭಕ್ತಿಯೇ ಅವರ ಅರ್ಪಣೆ.

ಅಂಗಳದ ನಡುವಿನಲ್ಲಿದ್ದುದು ಕಲ್ಲು ಮಂಟಪಗಳು ಹಾಗೂ ಅಲ್ಲಿ ರವಿಯ ನೆರಳು ಬೆಳಕಿನ ಆಟ - ಎಲ್ಲರಿಗೂ ತಮ್ಮೂರ ಊರ ನಡುವಿನ ದೇಗುಲ ನೆನಪಿಗೆ ಬರುವಂತೆ. ಮಂತ್ರ ಘೋಷ, ಘಂಟಾನಾದ, ಮಂಗಳಾರತಿಯ ತೇಜದ ವಿಶಿಷ್ಟ ಬೆಳಕಲ್ಲಿ ದರ್ಶನ ಸುಸಾಂಗ. ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಹೊರಬಂದಾಗ ಏನೋ ತೃಪ್ತಿ.

ಜೀಪನ್ನು ಹಿಡಿದು ಹೊರಟೇಬಿಟ್ಟೆವು. ನಮ್ಮ ಗೈಡ್ - ‘ಚೆನ್ನಪ್ಪಣ್ಣ’ನವರು ನಮ್ಮನ್ನು ಶಿಶಿಲದಲ್ಲಿ ಕೂಡಿಕೊಂಡರು. ಚಾರಣದ ಪ್ರಾರಂಭದ ತಾಣ ತಲುಪುವಷ್ಟರಲ್ಲಿ ನೇರ ನೆತ್ತಿಯ ಬಿಸಿಲಿತ್ತು.

* * * *

ಪ್ರಾರಂಭದ ದಾರಿ ತುಸು ಹೆಚ್ಚೇ ಕಡಿದಾಗಿತ್ತು. ೪೫ ಡಿಗ್ರಿಯಷ್ಟು ಇಳಿಜಾರು. ಉಸ್ ಉಸ್ ಎಂದು ಅಲ್ಲಲ್ಲೆ ಕೂತು ನಿಂತು ಕಾಡನ್ನು ದಾಟುವುದರಲ್ಲಿ ನೀರಿನ ಬಾಟಲಿಗಳಾಗಲೇ ಖಾಲಿಯಾಗುವುದರಲ್ಲಿದ್ದವು. ಆರಂಭದ ಕಾಡು ದಾಟಿದ ನಂತರ ಸ್ವಲ್ಪ ಸಮತಟ್ಟಾದ ನೆಲ. ಅಲ್ಲೆ ಮರದ ತಂಪಿನಲ್ಲಿ ಊಟ. ಆ ಜಾಗದಿಂದಲೇ ಅಮೇತಿಕಲ್ ಪರ್ವತದ ತುತ್ತ ತುದಿಯ ಮೂರು ದೊಡ್ಡ ಕಲ್ಲು ಬಂಡೆಗಳು ಕಾಣುತ್ತಿದ್ದವು. ನಮ್ಮ ಗೈಡ್ ಹೇಳಿದಂತೆ, ತುಳುವಿನಲ್ಲಿ ‘ಅಮೇ’ ಅಂದರೆ ಪಾಂಡವರು ಹಾಗೂ ‘ದಿಕ್ಕೆಲು’ ಅಂದರೆ ಒಲೆ. (ಒಂದೊಂದು ಬಂಡೆಯೂ ಸುಮಾರು ಮೀಟರ್‌ಗಳಷ್ಟು ಎತ್ತರ. ಅದನ್ನು ಪಾಂಡವರು ಹೇಗೆ ಬಳಸುತ್ತಿದ್ದರೋ, ದೇವರೇ ಬಲ್ಲ). ಇಷ್ಟು ದೂರದಿಂದ ನೋಡಿದರೂ, ಶಿಖರದೆಡೆಗೆ ಒಂದು ಅಂದಾಜಿನ ಮಾರ್ಗವೂ ಕಾಣದು. ಗೈಡ್ ಇರದಿದ್ದರೆ ಅರ್ಧ್ ದಾರಿಗೇ ವಾಪಸ್ ಬರಬೇಕಾಗಿತ್ತು!

ಬೇಸಿಗೆಯಲ್ಲಿ, ಈ ಮಾರ್ಗದಲ್ಲಿ ನೀರು ಸಿಗುವುದು ಒಂದೇ ಒಂದು ತಾಣದಲ್ಲಿ. ‘ಅದಿನ್ನೆಷ್ಟು ದೂರ?’ ಎಂದು ತಲೆಗೊಂದೆಂಬಂತೆ ಪದೇ ಪದೇ ಗೈಡನ್ನು ಕೇಳಿದೆವು. ಅವರೂ ಸಹ ಎಲ್ಲರಿಗೂ - ‘ಇಲ್ಲೇ’, ‘ಇನ್ನೈದು ನಿಮಿಷ’, ‘ಇನ್ನು ಹತ್ತು ನಿಮಿಷ’ ಎಂದು ಶಾಂತವಾಗಿ ಹೇಳುತ್ತಿದ್ದರು. ಕೊನೆಗೂ ಅಲ್ಲಿ ತಲುಪಿದಾಗ ಹೊಟ್ಟೆ ತುಂಬಾ ಕುಡಿದು ಎಲ್ಲಾ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಹೊರಟೆವು. ಮುಂದೆ ಹುಲ್ಲು, ಸಣ್ಣ ಕಲ್ಲು ಬಂಡೆಗಳಿಂದ ಕೂಡಿದ zigzag ದಾರಿ. ಸಾಗುತ್ತಾ ನಿಲ್ಲುತ್ತಾ ಸವಿಯುತ್ತಾ ಕ್ಲಿಕ್ಕಿಸುತ್ತಾ ಮಾತಾಡುತ್ತಾ, ಒಂದು ಏಕಾತನದ (monotonous) ಲಯದಲ್ಲಿ ಹತ್ತುತ್ತಿದ್ದೆವು. ಆದರೆ ಕೃಷ್ಣ ಮಾತ್ರ, ಭಾರವಾದ ಬ್ಯಾಗಿನ ಕಾರಣ, ಬಹಳ ಕಷ್ಟ ಪಡಬೇಕಾಯಿತು.

ಒಂದೆಡೆ 60 ಡಿಗ್ರಿ ಇಳಿಜಾರಿನ ಬಂಡೆ. ಷೂ ಗ್ರಿಪ್ ಚೆನ್ನಾಗಿದ್ದುದರಿಂದ ಯಾರಿಗೂ ಕಷ್ಟವಾಗಲಿಲ್ಲ. ಬಂಡೆ ತೇವವಿದ್ದರಂತೂ ಸಾದ್ಯವೇ ಇಲ್ಲ ಬಿಡಿ. ಮತ್ತೊಂದು ಕಡೆ ತೀರಾ ಇಳಿಜಾರಿನ ಕಲ್ಲುಬಂಡೆಯ ಸಂದು ಗೊಂದುಗಳಲ್ಲಿ ನೂರಾರು ಬಾಳೆ ಗಿಡಗಳು! (ಅಲ್ಲಿ ಒಳಗೊಂದು ನೀರಿನ ಸೆಲೆಯಿತ್ತೆಂದು ಕಾಣುತ್ತದೆ). ನಿಂತು ಒಮ್ಮೆ ಹಿಂದೆ ತಿರುಗಿ ನೋಡಿದರೆ ಪರ್ವತಗಳ ಸಾಲು ಸಾಲೇ ಕಾಣುತ್ತದೆ - ಅದೋ ಎತ್ತಿನ ಭುಜ, ಅದೋ ಹುಲಿ ಮಲೆ ಎಸ್ಟೇಟ್, ಅದೋ ಭತ್ತದ ರಾಶಿ - ಅಲ್ಲಿಂದ ಮೂಡಿಗೆರೆ 3 ಕಿ.ಮೀ. ಅದು ಚಾರ್ಮಾಡಿ ಪರ್ವತ ಶ್ರೇಣಿ. ಇತ್ತ ಶಿರಾಡಿ! ಇಲ್ಲೇ ಹೀಗೆ! ಇನ್ನು ಶಿಖರದಿಂದ?!

ಒಂದೆಡೆ ದೊಡ್ಡ ಬಂಡೆಯ ಅಡಿಯಲ್ಲಿ ನಿಂತೆವು. ಅದು ಟೆಂಟ್ ಮಾಡಬಹುದಾದಂತಹ ಜಾಗ - ರಾತ್ರಿ ತಂಗುವುದಕ್ಕೆ ಒಂದು ಪರ್ಯಾಯ. ಕೃಷ್ಣನಿಗೆ ಹೆಚ್ಚೇ ಬಳಲಿದ್ದ - ‘ಇಲ್ಲೇ ತಂಗುವ’ ಎಂದ. ಕೆಲವರು ಅದನ್ನು ಪುಷ್ಟೀಕರಿಸುತ್ತ ಮುಂಜಾನೆ ಎದ್ದು ಶಿಖಿರಕ್ಕೆ ಹೊಗಿಬರಬಹುದಲ್ಲ - ಎಂದು ಉಪಾಯ ಹೂಡಿದರು. ಶಿಖರ ತಲುಪುವ ವೇಳೆ 5, 6 ಎಂದು ಹಲವಾರು ಬಾರಿ ಪರಿಷ್ಕೃತಗೊಂಡು ಈಗ 6.30 ಆಗುವಂತೆ ಕಾಣುತ್ತಿತ್ತು. ಮೋಡ ಕವಿದು ಮಬ್ಬಾಗಿದೆ. ಮುಂದೆ ಕಡಿದಾದ ಕಾಡು ಬೇರೆ. ಏನಾಗುತ್ತೋ ನೋಡೋಣ; ಮುಂದೆ ಕಷ್ಟವಾದರೆ, ಹಿಂದಿರುಗಿ ಇಲ್ಲೇ ಟೆಂಟ್ ಮಾಡುವ ಸಾದ್ಯತೆ ಇದ್ದೇ ಇದೆಯೆಂದು ಏರಲು ಮುಂದುವರಿದೆವು.

* * * *

ಎಲ್ಲರ ಮನಸ್ಸಿನಲ್ಲೂ, ಆಗ ತಾನೇ ಮೂಡಿದ ಸಂಜೆಗತ್ತಲಿನಿಂದ ಶುರುವಾದ ಒಂದು ಸಣ್ಣ ಭಯ, ಮಾತಾಡದೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ಗೈಡ್ ಇದ್ದುದರಿಂದ ಎಲ್ಲರಿಗೂ ಒಂದಿಷ್ಟು ದೈರ್ಯ. ಇಲ್ಲದಿದ್ದರೆ ಆ ಕಾಡನ್ನು ದಾಟುವ ದುಸ್ಸಾಹಸ ಖಂಡಿತಾ ಮಾಡುತ್ತಿರಲಿಲ್ಲ! ಇಳಿಬೆಳಕಿನಲ್ಲಿ, ಒತ್ತೊತ್ತಿನ ವನದಲ್ಲಿ, ಚೀರುವ ನೀರವತೆಯಲ್ಲಿ, ಜೀರುಂಬೆಯೋ ಅಥವಾ ಇನ್ಯಾವುದೋ ಕಾಡು ಜಂತುವಿನ ಶಿಳ್ಳೆಯಲ್ಲಿ, ಮುಳ್ಳಿನ ಗಿಡಗಳಿಂದ ತಪ್ಪಿಸಿಕೊಳ್ಳುತ್ತಾ, ಕೊಂಬೆಗಳನ್ನು ಬಗ್ಗಿಯೋ, ಜಿಗಿದೋ ಸಾಗಿ, ಗಿಡಗಳ ಖಾಂಡವನ್ನೇ ಸಹಾಯವಾಗಿ ಹಿಡಿದೆಳೆದು ಸಾಗುತ್ತಿದ್ದೆವು. ಚೆನ್ನಪ್ಪಣ್ಣನವರು ಮುಂದೆ ಸಾಗುತ್ತಾ, ಅಲ್ಲಲ್ಲೆ, ದಾರಿಗಡ್ಡವಾದುದನ್ನು ತಮ್ಮ ಮಚ್ಚಿನಲ್ಲಿ ಕಡಿಯುತ್ತ, ಅಲ್ಲಲ್ಲಿ ಎಚ್ಚರಿಕೆ ಹೇಳುತ್ತಿದ್ದರು. ನನಗೋ, “ಎಲ್ಲಿದ್ದೀನಪ್ಪಾ!”, ‘ನಾನ್ಯಾಕಾದ್ರೂ ಬಂದ್ನೋ” ಅಂತ ಅನ್ನಿಸ್ತಾ ಇತ್ತು.

ಕಾಡು, ಬೆಟ್ಟದ ತುದಿಯ ಹೆಬ್ಬಂಡೆಯನ್ನು ಬಳಸಿ, ಹಿಂಬಾಗದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದೆ ಕಡಿದಾದ ಮಾರ್ಗ; ಕಾಲು ದಾರಿಯನ್ನು ಮುಚ್ಚುವಂತಹ ಎದೆಯೆತ್ತರದ ಹುಲ್ಲು. ಕೆಲವು ಕಡೆಯಲ್ಲಂತೂ ಜಾರಿದರೆ ದೇವರೇ ಗತಿಯೆನ್ನುವಂತೆ. ಅಲ್ಲಲ್ಲಿ ಸಡಿಲ ಮಣ್ಣು ಅಥವಾ ಸಡಿಲಾದ ಕಲ್ಲುಗಳಿರುತ್ತಿದ್ದುದರಿಂದ ಪ್ರತಿ ಹೆಜ್ಜೆಗೂ ಹುಲ್ಲನ್ನು ಗೊಂಚಲಾಗಿ ಹಿಡಿದು ಹತ್ತಬೇಕಾಗಿತ್ತು. ಶಿಖರ ತಲುಪಿದಾಗ ಮೋಡ ಕವಿದಿದ್ದರಿಂದ ಆಗಲೇ ಸುಮಾರು ಕತ್ತಲಾಗಿತ್ತು. ಸೂರ್ಯಾಸ್ತ ನೋಡುವ ಅವಕಾಶ ನನಗೆ ಮತ್ತೆ ಕೈ ತಪ್ಪಿತ್ತು.

ಗಾಳಿಗಡ್ಡವಾಗುವಂತಿದ್ದ ಬಂಡೆಯ ಮಗ್ಗುಲಲ್ಲಿ ೨ ಟೆಂಟ್ ಹಾಕಿದೆವು. ಮತ್ತೊಂದು ಸ್ವಲ್ಪ ದೂರದಲ್ಲಿ. ಚೆನ್ನಪ್ಪಣ್ಣನವರು ಆಗಲೇ ಕಟ್ಟಿಗೆ ಒಟ್ಟು ಮಾಡಿ ಬೆಂಕಿ ಹಚ್ಚಿದ್ದರು; ನಮ್ಮ ‘ಕ್ಯಾಂಪ್ ಫೈರ್’ ಸಿದ್ದವಾಗಿತ್ತು. ಬೆಂಕಿ ಕಾಯಿಸಿಕೊಂಡು, ಒಂದಿಷ್ಟು ತಿನ್ನುತ್ತಾ, ಹರಟೆ ಹೊಡೆದು ಕತ್ತಲಾಗುವಷ್ಟರಲ್ಲಿ ಎಲ್ಲರೂ ಟೆಂಟ್ ಒಳಗೆ. ಮಲಗುವಾಗ ಇನ್ನೂ ೮ ಘಂಟೆ. ನೆಲಕ್ಕೆ ಬೆನ್ನು ಹಾಕಿ ಚುಕ್ಕಿ ಚಂದಿರರನ್ನು ದಿಟ್ಟಿಸಲು ಬಾನೆಲ್ಲ ಮೋಡ. ಅಂದು ರಾತ್ರಿ ಶಿಶಿಲದಲ್ಲಿ ಜಾತ್ರೆಯ ಕೊನೆ ದಿನದ ಉತ್ಸವ ಆಚರಣೆಗಳ ಬೆಳಕನ್ನು ನೋಡೋಣವೆಂದರೆ ಕೆಳಗೂ ಮೋಡ. ಇನ್ನೇನು ಮಲಗುವುದೊಂದೇ option. ನನಗಂತೂ ಕಣ್ಮುಚ್ಚಿದೊಡನೆ ನಿದ್ದೆ.

ಒಮ್ಮೆ ರಾತ್ರಿ ಎಚ್ಚರಾದಾಗ ‘ಧೋ’ ಎಂದು ಮಳೆ ಸುರಿಯುತ್ತಿತ್ತು. ಟೆಂಟ್ ಮೇಲೆ ಕವರ್ ಮುಚ್ಚಿದ್ದರೂ, ಹನಿ ತೊಟ್ಟಿಕ್ಕುತ್ತಿತ್ತು; ಇತ್ತ ನೋಡಿದರೆ ಕೃಷ್ಣ, ಪ್ರದೀಪ ಗೊರಕೆ. ಎಷ್ಟೋ ಮೈಲಿ ದೂರ ಬಂದು, ಈ ಬೆಟ್ಟದ ತುದಿಯಲ್ಲಿ, ಈ ಮಳೆಯಲ್ಲಿ, ರಾತ್ರಿ ಕಳೆಯುವ ಅದ್ಯಾವ ಘನ ಸಾದನೆಗಾಗಿ ಇಲ್ಲಿಗೆ ಬಂದೆ ಎಂದೆನಿಸಿತು.

ಪಕ್ಕದ ಟೆಂಟ್‌ಗೆ ಸರಿಯಾಗಿ ಕವರ್ ಮುಚ್ಚದ ಕಾರಣ ಒಳಗೆಲ್ಲ ನೀರು. ಮಿಥುನ, ರಾಧೇಶ ಎದ್ದು ಕೂತುಬಿಟ್ಟಿದ್ದರಂತೆ. ನವೀನ ಪ್ರಳಯಕ್ಕೂ don’t care ಎಂಬಂತೆ ಮಲಗಿದ್ದನಂತೆ. ಕೆಲವರಿಗೆ ರಾತ್ರಿ ಜಾತ್ರೆಯ ಓಲಗ ಕೇಳಿಸಿತಂತೆ. ಕೆಲವರಿಗೆ ಟೆಂಟ್ ಸುತ್ತಾ ಯಾರೋ/ಏನೋ ಓಡಾಡಿದಂತಾಯಿತಂತೆ!

* * * *

ಮುಂಜಾನೆಯ ವಿಚಾರವೇ ಬೇರೆ ಬಿಡಿ. ಅದನ್ನು ಇಲ್ಲಿ ಮತ್ತೆ ಹೇಳಬೇಕಾಗಿಲ್ಲ. ಅದು ಪ್ರತಿ ದಿನದ ಕೊಡುಗೆ. (”ಮೂಡಣ ಮನೆಯ ಮುತ್ತಿನ ನೀರಿನ..” ನೆನಪಿಗೆ ಬಂತು). ಅಲ್ಲಿಂದ ಮುಂದುವರೆದು ಒಂದು ದೊಡ್ಡ ಬಂಡೆಯನ್ನು ಹತ್ತಿ ತುತ್ತ ತುದಿ ತಲುಪಿದೆವು. ಅಲ್ಲೊಂದು ಬಾವುಟ ಕಲ್ಲುಗಳೊಳಗೆ ಅಚಲವಾಗಿ ನಿಂತಿದೆ. ಅಲ್ಲಿಯ ನೋಟಗಳಿಗೆ ಎಲ್ಲರೂ ಮೂಕರಾಗಿ ಹೋದೆವು ಎಂದಷ್ಟೇ ಹೇಳಬಲ್ಲೆ. ಸುತ್ತೆಲ್ಲ ಮೋಡದ ಸಾಗರ. ಸೂರ್ಯ ಅವುಗಳ ಮರೆಯಲ್ಲಿ ಕ್ಷೀಣವಾಗಿ ಬೆಳಗುತ್ತಿದ್ದಾನೆ! ಮೋಡಗಳು ನಿಧಾನವಾಗಿ ಒಂದೇ ಗತಿಯಲ್ಲಿ ತೇಲುತ್ತಿವೆ. ಹಿಂಡು ಹಿಂಡಾಗಿ ಪಡುವಣದಿಂದ ಮತ್ತಷ್ಟು ಬರುತ್ತಲೇ ಇವೆ. ಇದರಲ್ಲಿ ಒಂದೊಂದು ಮೋಡ ಅದೆಲ್ಲಿ ಹೋಗಿ ಕರಗುವುದೆಂಬ ಬೆರಗು. ಮೋಡಗಳು ಸ್ವಲ್ಪವೇ ಸರಿದು ಸಂದಾದರೂ, ಕೆಳಗಿನ ಆಳದಲ್ಲಿ ಪರ್ವತಗಳ ಸಾಲು ಸಾಲು ಕಾಣುತ್ತಿತ್ತು. ಸ್ವರ್ಗದಿಂದ ಭುವಿಯನ್ನು ನೋಡಿದಂತಾಗಿತ್ತು. ಕ್ಯಾಮೆರಾ ತೆಗೆದು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಎಲ್ಲರೂ ಬಂಡೆಗಳ ತುದಿಯಲ್ಲಿ ಕೂತು ಮೋಡಗಳನ್ನೋ, ದಿಗಂತವನ್ನೋ, ಏನನ್ನೋ ದಿಟ್ಟಿಸುತ್ತ ಕೂತ್ತದ್ದು ಅದೆಷ್ಟು ಹೊತ್ತೋ! ಪ್ರಮೋದ್ ಆಗ “ಬಾರೇ, ಬಾರೇ” ಹಾಡಿದ. ಅದೊಂದು ಸಂಪೂರ್ಣ ರಸ ಘಳಿಗೆಯಾಗಿತ್ತು.

* * * *

ಇಳಿದವರೇ ಸೀದಾ ಚನ್ನಪ್ಪಣ್ಣನವರ ಮನೆಯಲ್ಲಿ ಲ್ಯಾಂಡ್. ರುಚಿರುಚಿಯಾದ ಮಾವಿನ ಹಣ್ಣಿನ ಆತಿಥ್ಯ ಸ್ವೀಕರಿಸಿದೆವು. ಎಲ್ಲಾ ಸಮಯದಲ್ಲೂ ನಗುನಗುತ್ತಲೇ ಇದ್ದು, ನಮ್ಮ ತರಲೆ ತೊಂದರೆಗಳನ್ನು ಸಹಿಸಿಕೊಂಡು, ಚಾರಣದ ಯಶಸ್ವಿಗೆ ಕಾರಣರಾದದ್ದಕ್ಕೆ ಚೆನ್ನಪ್ಪಣ್ಣನವರಿಗೆ ನಾವು ಕೃತಜ್ಞತೆಯಿಂದ ವಂದಿಸಿ ವಿದಾಯ ಹೇಳಿದೆವು. ಅಲ್ಲಿಂದ ಸೀದಾ ನಮ್ಮ organizer ಗೋಪು ಗೋಖಲೆಯವರ ಮನೆಗೆ; ಅವರ ಅಡಿಕೆಯ ತೋಟದ ಹಿಂದಿನ ನದಿಯಲ್ಲಿ ಸ್ನಾನ (ಜಲ ಮಾಲಿನ್ಯ). ನಂತರ ಮನೆಯಲ್ಲಿ ಭಾರೀ ಭೋಜನ. ಹಲಸಿನ ಬೀಜದ ಸಾರು, ಹಲಸಿನ ಹಣ್ಣಿನ ಸಾರು - ಹಬ್ಬದಡುಗೆ! (ಜಾತ್ರೆಯ ಪ್ರಯುಕ್ತ ಇರಬಹುದು).

ಆನಂತರ ಶಿಶಿಲೇಶ್ವರನ ದರ್ಶನ. ದೇವಸ್ಥಾನದ ದಂಡೆಯಲ್ಲಿ ಕಪಿಲೆ - ಅಲ್ಲಿ ಸಾವಿರಾರು ದೊಡ್ಡ ಮೀನುಗಳು. ಅವುಗಳಿಗೆ ಪುರಿ ಎಸೆಯುತ್ತಾ ಫೋಟೋ ಸೆಷನ್. ತೂಗು ಸೇತುವೆಯ ಮೇಲೆ ನಿಂತು ವೀಕ್ಷಣೆ - ಸುತ್ತೆಲ್ಲ ಬೆಟ್ಟ, ನಡುವೆ ಕಪಿಲೆ, ದಡದಲ್ಲಿ ದೇವಸ್ಥಾನ … ಆಹಾ!

ಬೆಟ್ಟ, ಮೋಡ, ಬಿಸಿಲು, ಮಳೆ, ಸಾಗರ, ಗಾಳಿ, ಹಸಿರು, ಕಾಡು, ವನ್ಯ ಜೀವಿಗಳು, ಶಿಶಿಲ ಧರ್ಮಸ್ಥಳಗಳಲ್ಲಿ ದೇವರ ದರ್ಶನ .. ನಮ್ಮ ಚಾರಣ ಒಂದು ಆಧ್ಯಾತ್ಮಿಕ ಯಾತ್ರೆಯಾಗಿತ್ತು!

May 4, 2007

ಬೇಸಿಗೆಯ ಮಳೆ

ಮಧ್ಯರಾತ್ರಿ ಮೇ ಮಳೆಯ ಸದ್ದಿಗೆದ್ದಾಗ:

May 3, 2007

Too small!

This evening on bmtc bus, i wrote:

Leaves motionless
even the dust;

the sweating faces,
yet, bear no grin

as they all know
its going to rain!

for which, paragu (my new guru) said:

its about rainfall
in a parched throat
but its too small
a poem you wrote
!

Apr 20, 2007

ನಿನ್ನೆ ಸಂಜೆಯ ಮಳೆ

ಬೇಸಿಗೆಯ ಬಾಂದಳದಲೇಕೋ
ಕರಿಮೋಡ ಮಿಂಚಿನ ಬೆಳಕು
ಈ ಸಂಜೆಯಲೇಕೋ
ಬೆಳದಿಂಗಳ ಇಣುಕು

~ ~

ಬೀಸುವ ಚಾಮರದಲಿ ಜಾರೆ
ಭಾರದ ಹನಿ ನೀರು
ನೆನೆವ ತುಟಿಗಳಲಿ ತಾರೆ
ನಗೆಯ ಬಿಂದು ನೂರು

~ ~

ಈ ದಿನ ಸಂಜೆ
ಮಳೆಗಾಲಕೂ ಮುಂಚೆ
ಊರಿನಾಚೆ,
ಸರೋವರದೀಚೆ,
ಮಳೆಯ ಸೂಚಿಸೊ ಗಾಳಿ ಬೀಸಿ,
ಮಣ್ಣ ಕಂಪ ಸೂಸಿ,
ನಾ ನಲಿದ ಉಯ್ಯಾಲೆ ಯಾವುದೋ!

Jan 29, 2007

At Park’s

Mr & Mrs. Park, thanks for your warm hospitality and ofcourse, delicious food.

Jan 11, 2007

Pay more & get less

Last year I got an internet connection at home solely because I was fedup with websense at office :D. I started with Home250 (Rs.250/month) plan which had traffic limit of 400MB. And I, used to reach the limit within the first 5 days of the month! Bravo!
[Nevertheless, the connection had decent & consistent 30KB speed]

Since I wanted to experience the ‘always on’ feel with the unlimited volume freedom - I went for HomeUL900. And yes, I broke the shackles and made full use of what I had - linux distros, windows patches, softwares, movies, google tech talks, youtube videos, mp3s, online radio and most important of all - blogs (more about blogs later).

I was totally satisfied until BSNL upgraded the speed from 256kbps to 2mbps, for all plans but that of mine. what the hell… I have to pay more for a lesser speed?

If you want to do me a favour, please fill a pition here: http://www.ipetitions.com/petition/900ul/signatures.html.

Jan 2, 2007

ಗೋಕರ್ಣದಲ್ಲಿ ವರ್ಷಾರಂಭ

ಗೋಕರ್ಣದ ಓಂ ಬೀಚ್‌ಗೆ ಹೊರಟ್ವು.. ಸ್ಕರ್ಪಿಯೋದಲ್ಲಿ. ನಾವೂಂದ್ರೆ - ಇಷ್ಟು ದಿನ ತಲೆಮರೆಸಿಕೊಂಡಿದ್ದ ಸುನಿಲ, ಮನೀಶ ಮತ್ತವನ ಅಳಿಕೆಯ ಹಳೆ ಸ್ನೇಹಿತರಾದ - ಶರತ, ಸಮೀರ, ಬಾಳ್ಳಾರಿಯಿಂದ ಬಂದು ಜಾಯಿನ್ ಆದ ಸೋಮ. ಶ್ರೀನಿಧಿ ಶಿವಮೊಗ್ಗದಲ್ಲಿ ಕೈ ತೋರ್ಸಿ ಹತ್ತೊ ಪ್ಲಾನ್. ಅವ್ನ್ ಮನೇಲ್ಲೆ ಊಟ, ಎಲೆ ಅಡಿಕೆ (ಅವುರ್ದು ಅಡಿಕೆ ಮಂಡಿ ಇದೆ). ಅಲ್ಲಿಂದ ಸೀದಾ ಗೋಕರ್ಣ. ಟೈಮಿದ್ರೆ ಅಲ್ಲಲ್ಲಿ ಸೈಟ್ ಸೀಯಿಂಗ್.

ಬೆಳಿಗ್ಗೆ ಬೆಳಿಗ್ಗೆ 201 ಅಲ್ಲಿ ಸೊಳ್ಳೆ ಕೈಲಿ ಕಚ್ಚುಸ್ಕೊಂಡು, ಊರಿಗ್ ಮುಂಚೆ ದೇವೇಗೌಡ ಪೆಟ್ರೋಲ್ ಬಂಕಲ್ಲಿ, ಛಳೀಲ್ಲಿ ನಿಂತ್ರೆ, ಮನೀಶ bmtc ಬಸ್‌ಗಿಂತ ಲೇಟಾಗಿ ಬಂದ. ಒಬ್ಬೊಬ್ರುನ್ನೆ ಪಿಕ್‌ಅಪ್ ಮಾಡ್ಕೊಂಡು ಯಶವಂತಪುರ ದಾಟೋ ಅಷ್ಟ್ರಲ್ಲಿ ಹೊಟ್ಟೆ ಹಸಿತಾ ಇತ್ತು… ಒಂದಷ್ಟು ಡಬ್ಬ ಹಾಡ್‌ಗಳಿರೊ ಸಿಡಿಗಳಿದ್ವು.. ಬರೀ ಹಿಮ್ಮಿದು.. ಕೇಳಿ ಕೇಲಿ ತಲೆ ಕೆಟ್ಟೋಯ್ತು. ರೋಡ್ ಸೂಪರ್ರಾಗಿದೆ ಅಂತ ಮನೀಶ 100+ ಚಚ್ತಾ ಇದ್ದ…

ಕ್ಯಾತ್ಸಂದ್ರದಲ್ಲಿ ಇಡ್ಲಿ ವಡೆ, ದೋಸೆ ಕಾಪಿ ಸೂಪರ್ರಾಗಿತ್ತು. ಎಲ್ರೂ ಮತಾಡ್ದೆ ತಲೆ ಬಗ್ಗುಸ್ಕೊಂಡ್ ತಿಂದಿದ್ದೆ ತಿಂದಿದ್ದು.

ಎಲ್ರಿಗೂ ತಿಪ್ಟೂರ್ ಪರ್ಚಯ ಮಾಡುಸ್ದೆ.. ಅದು ನಮ್ ಸ್ಕೂಲು, ಅದು ನಮ್ ಹೈಸ್ಕೊಲು, ಅದು ನಮ್ ಮನೆ, ಅದು ನಮ್ ಕಾಲೇಜು.. ಸೋಮ ಅಂಡ್ ಕಂಪನಿ ಸ್ವಲ್ಪ ಜ್ಯೂಸ್ ತಗೊಂಡ್ರು. ಅಲ್ಲಿಂದ ಸೋಮ ಡ್ರೈವಿಂಗ್ - ಅರ್ಸೀಕೆರೆಗೆ 140kmph ಅಲ್ಲಿ ತಲ್ಪುದ್ವಿ. ಕಡೂರ್ ಹತ್ರ ಎಳ್ನೀರು ಬೊಂಬ್ಲು ತಿನ್ಕೊಂಡು, ಫೋಟೊ ಹೊಡ್ಕೊಂಡು ಒಯ್ತಾ ಇದ್ವಿ. ಮಧ್ಯಾನ ನಿಧಿ ಮನೆಲ್ಲಿ ಊಟಕ್ಕೆ ಕೂತ್ರೆ, ಪಾರ್ಟಿ, ಹಬ್ಬದೂಟ ಮಾಡ್ಸಿದ್ದ. ನಾವ್ ಬಿಡ್ತಿವಾ…?

ಸಾಗರಕ್ಕೂ ಸ್ವಲ್ಪ ಮುಂಚೆ, ಬ್ರೇಕ್ ಹಿಡಿತಾ ಇಲ್ಲ ಅಂತ ಮನೀಶ ಗಾಡಿ ನಿಲ್ಲುಸ್ದ. ನೋಡುದ್ರೆ, ಬೆಲ್ಟ್ ಬಿಚ್ಕೊಂಡ್ ಬಿಟ್ಟಿತ್ತು. ಬ್ಯಾಟ್ರಿ ರನ್ ಆಗ್ತಿರ್ಲಿಲ್ಲ. ಕೂಲೆಂಟು ಸರ್ಕುಲೇಟ್ ಆಗ್ದೆ ಇಂಜಿನ್ ಬೇರೆ ಹೀಟ್ ಆಗ್ಬಿಟ್ಟಿತ್ತು. ಸಾಗರ್ದಲ್ಲಿ ಗ್ಯಾರೇಜ್ ಸಿಗುತ್ತೆ ಅಂತ ಏನೋ ಧೈರ್ಯ ಮಾಡಿ, ಬೆಲ್ಟ್ ತಗ್ದು ಹೊರ್ಟೇ ಬಿಟ್ವಿ. ಇಂತ ಪರಿಸ್ಥಿತಿಲ್ಲೂ ಸೋಮ ಓವರ್‌ಟೇಕ್ ಮಾಡಕ್ ನೋಡ್ತಿದ್ದ!

ಹಂಗೂ ಹಿಂಗೂ, ಅದ್ರುಷ್ಟವಶಾತ್, ಮಹಿಂದ್ರ ಮೆಕ್ಯಾನಿಕ್ ಒಬ್ಬ ಸಿಕ್ದ. ಬೇಗ ಸರಿ ಮಾಡ್ಕೊಟ್ಟೋದ. ಅಷ್ಟ್ರಲ್ಲಿ ಭಾಳ ಲೇಟ್ ಆಗೋಗಿತ್ತು. ಸೂರ್ಯಾಸ್ತ ಗೋಕರ್ಣದಲ್ಲಿ ನೋಡೋ ಆಸೆ ಕೈ ಬಿಡ್ಬೇಕಾಯ್ತು.

ಬೆಳ್ದಿಂಗ್ಳಲ್ಲಿ ಜೋಗ್ ಫಾಲ್ಸ್ ಹೇಗ್ ಕಾಣುತ್ತೆ ಅಂತ ನೋಡೋ ಆಸೆ ಆಗಿ ಜೋಗ್‌ಗೆ ಹೋದ್ವಿ. ನಮ್ಗೆ ನಿರಾಸೆ ಆಗ್ಲಿಲ್ಲ. ಬೆಳ್ದಿಂಗ್ಳಲ್ಲಿ ಜೋಗಿನ ಸೌಂದರ್ಯನೇ ಬೇರೆ. ಕಂದರದಾಚೆ ಒಂದು ಬೆಳ್ಳಿ ಎಳೆ ಕಾಣುಸ್ತಾ ಇರುತ್ತೆ. ಮಧ್ಯೆ ಹಸಿರೆಲ್ಲ ಕಪ್ಪಾಗಿದೆ. ರಾತ್ರಿಯ ಕಾಡಿನ ಮಧ್ಯದ ನೀರವತೆ ನಿಶ್ಯಬ್ದಗಳ ನಡುವೆ ಭೋರ್ಗರೆತ ಕೇಳುಸ್ತಾ ಇದೆ.. ಕೇಳಿ.. ಈ ಹೊತ್ತಿನಲ್ಲಿ ಆ ಜಲಪಾತದ ಬುಡದಲ್ಲಿರೊ ಬಂಡೆ ಮೇಲೆ ಕೂತು, ಆ ಧಾರೆ ನೋಡ್ತಾ ಕೂರೊದು ಹೇಗಿರುತ್ತೆ ಅಂತ ಕಲ್ಪಿಸ್ಕೊತಾ ಇದ್ದೆ. [ಕತ್ಲಲ್ಲಿ ಫೋಟೋ ಸರಿಯಾಗಿ ಬರ್ಲೇ ಇಲ್ಲ]

ಬೆಳ್ದಿಂಗ್ಳಲ್ಲಿ ಪಶ್ಚಿಮ ಘಟ್ಟಗಳನ್ನ ದಾಟ್ತಾ ಇದ್ವಿ.. ಹಿಂದಿನ ಕಿಟ್ಕಿಯಿಂದ, ಕಾಡು, ರೋಡಿನ ತಿರುವುಗಳನ್ನ ನೋಡ್ತಾ ಇದ್ದೀನಿ.. ದೂರ ಹೋಗ್ತಾ ಹೋಗ್ತಾ, ಹಿಂದಿರುವ ಬೆಟ್ಟ, ಇನ್ನೂ ಎತ್ತರ, ಅಗಾಧ ಅಗ್ತಾ ಇದ್ಯೇನೋ ಅನ್ಸುತ್ತೆ. ಬೆಟ್ಟಗಳ ಹಿಂದೆ, ನೀಳ ಮರಗಳ ಹಿಂದೆ, ಈ ಚಂದ್ರ ಬೇರೆ ಫಾಲೋ ಮಾಡ್ತಾ ಇದ್ದಾನೆ… ಇದು ಯಾವ್ ಲೋಕ ಅನ್ನಿಸ್ತಾ ಇತ್ತು.

ಗೋಕರ್ಣ‌ದಿಂದ ಓಮ್ ಬೀಚ್‌ಗೆ ಹೋಗ್ಬೇಕು ಅಂದ್ರೆ ಒಂದು ಸಣ್ಣ ಬೆಟ್ಟ ಹತ್ತಿ ಇಳಿಬೇಕು. ಬೆಟ್ಟದ ರೋಡು ತುಂಬ ಇಳಿಜಾರಿದೆ (ಸ್ಟೀಪಿದೆ). ಅದರ ಭುಜಗಳಲ್ಲಿ ಹತ್ತುವಾಗ ಸಮುದ್ರ ಕಾಣುತ್ತೆ… ಆ ಎತ್ತರದಿಂದ, ಅದೂ ಬೆಳ್ದಿಂಗ್ಳಲ್ಲಿ, ಸಮುದ್ರ ಕಾಣೋ ದೃಶ್ಯನ ಹೇಗೆ ವರ್ಣಿಸ್ಲಿ? ಎಲ್ರೂ ಉಸಿರು ಬಿಗಿ ಹಿಡಿದು ನೋಡ್ತಾ ಇದ್ವಿ.

ಓಮ್ ಬೀಚ್ ಸೇರೋ ಅಷ್ಟ್ರಲ್ಲಿ 11 ಆಗಿತ್ತು… as usual, ಸಿಕ್ಕಾಪಟ್ಟೆ ಜನ.. ನ್ಯೂ ಯೀಯರ್ ಅಂದ್ರೆ ತಮಾಷೆನಾ?

ತೀರದಲ್ಲಿ ಸುಮ್ನೆ ಅತ್ತಿಂದಿತ್ತ ಓಡಾಡುದ್ವಿ. ಸ್ವಲ್ಪ ಹೊತ್ತು, ಉಸುಕಿಗೆ ಬೆನ್ ಹಾಕಿ ಆಕಾಶ ನೋಡ್ತಾ, ಸಮುದ್ರದ ಹಾಡ್ ಕೇಳ್ತಾ ಇದ್ವಿ. ಅಷ್ಟ್ರಲ್ಲೆ 12 ಘಂಟೆ ಆಯ್ತು. ಸಿಕ್ಕಾಪಟ್ಟೆ ಪಟಾಕಿ ಹೊಡುದ್ರು. [ನಾನ್ ಇಲ್ಲಿಗ್ ಬಂದಿದ್ದು, ಹೊಸ ವರುಷದ ಆಚರಣೆಗಾಗಿ ಅಲ್ಲ… ಆ ದೃಶ್ಯ ಮತ್ತು ಶ್ರಾವ್ಯಗಳ ಸೌಂದರ್ಯಕ್ಕಾಗಿ.]

ಬೆಳಿಗ್ಗೆ ವಾಪಸ್ ಬಂದು, ಕೂಡ್ಲು ಬೀಚನ್ನೂ ನೋಡೋದು ಅಂತ ಡಿಸೈಡ್ ಅಯ್ತು.

ಗೋಕರ್ಣದಲ್ಲಿ ಎಲ್ಲ ರೂಮ್‌ಗಳೂ ಫುಲ್. ಕುಮ್ಟಕ್ಕೆ ವಾಪಸ್ ಹೋಗಿ ಕಾಮತ್ ಹೋಟ್ಲಲ್ಲಿ ಉಳ್ಕೊ ಬೇಕಯ್ತು. ಅಡ್ಡಿ ಇಲ್ಲ!