Mar 31, 2005

ನಾನಿಲ್ಲಿಯವನು

ಹಿಂದೂ ಇಂದೂ ಮುಂದೂ
ನಾನಿಲ್ಲಿಯವನು ಎಂದೆಂದೂತಾಯಿ ನಾಡ ಜೀವ ನಾಡಿ
ಮಾತೃ ಭಾಷೆಯ ಮೋಹ ಪಾಷ
ಕಣ್ಣ ಕಟ್ಟಿ ಬಿಗಿದಿರಲಿ ನನ್ನ ಎಂದೆಂದೂ
ನಾನಿಲ್ಲಿಯವನು ಎಂದೆಂದೂ

ನಲ್ಮೆಯ ನಡೆ ನುಡಿಯ ನಾಡು
ಹೊನ್ನ ಮಣ್ಣ ನದಿಗಳ ಜಾಡು
ಕಲೆಯ ಕಣ್ಣ ಭಾವ ಬೀಡು
ಜ್ಞಾನೋದಯದ ಗಿರಿಗಳ ಮಾಡು
ಕಸ್ತೂರಿಯ ಸೂಸಿಹುದು ವಿಶ್ವದೆಲ್ಲೆಡೆ
ನಾನಿಲ್ಲಿಯವನು ಎಂದೆಂದೂ

ಜನನಿ ನೀ ಬಸಿದ ಜೀವ ಕಣ
ಧನ್ಯತೆಯಲಿ ಮಿಂದಿದೆ ಅನು ಕ್ಷಣ
ಸಾರ್ಥಕತೆಯ ಸಾರಿದೆ ಅನು ಕ್ಷಣ
ಋಣದ ಎಳೆ ಬೆಸೆದಿರಲಿ ಮುಂದಣ-
ಜನ್ಮಕೂ- ದರುಶನವಾಗಲಿ ನಿನ್ನ ಚರಣ
ಸ್ವಾರ್ಥಿ; ನಾನಿಲ್ಲಿಯವನು ಎಂದೆಂದೂ

-ಚೇತನ್ ಪಿ.
೩೦-೦೩-೨೦೦೫

Mar 24, 2005

ಮೊನ್ನೆ ಮನೆ ಮುಟ್ಟಿದ್ದು

ಮುಳ್ಳು ಹತ್ತ ದಾಟಿತ್ತು
ಕೆಲಸ ಮಾಡಿ ತಲೆ ಕೆಟ್ಟಿತ್ತು
ಬಸ್ಸಲಿ ಜನಸಂಖ್ಯೆ ನೂರ ಎಂಟಿತ್ತು
ಶೆಖೆ ಇಂದು ಹತ್ತು ಪಟ್ಟಿತ್ತು
ಬೆವರಿ ಬಟ್ಟೆ ಮೈಗಂಟಿತ್ತು
ಕಾಲು ಆಸೀನಕೆ ಆಸೆ ಪಟ್ಟಿತ್ತು
ವಾಕ್-ಮನ್ ಕೈ ಕೊಟ್ಟಿತ್ತು
ದುರ್ಗಂಧಕೆ ಉಸಿರು ಕಟ್ಟಿತ್ತು
ಸಾರಾಯಿಯ ಸ್ಯಾಂಪಲ್ ಮೂಗ ಮುಟ್ಟಿತ್ತು
ಮೆಲ್ಛಾವಣಿ ಆಗಾಗ ತಲೆಯ ತಟ್ಟಿತ್ತು
ಮಬ್ಬುಗತ್ತಲು ಬೀಡು ಬಿಟ್ಟಿತ್ತು
ಯಾರಿಗೆ ಯಾರ ಮೇಲೋ ಸಿಟ್ಟಿತ್ತು
ಎಲ್ಲರ ಹಣೆ ಗಂಟಿಟ್ಟಿತ್ತು
ತಾಳ್ಮೆ ಗಂಟು ಮೂಟೆ ಕಟ್ಟಿತ್ತು
ಅಯ್ಯೋ…… ಶಿವನೇ….
ನನ್ನ ಶ್ರೀನಗರ ಬಂದೇ ಬಿಟ್ಟಿತ್ತು—————

ಚೇತನ್ ಪಿ
೨೩-೦೩-೨೦೦೫

ಇಂದೆಂಥಾ ನಲಿವು

ಬೇಸಿಗೆಯ ಈದಿನ ಇಂದು
ಮುಂಜಾನೆ ಬೇಗ ಎದ್ದು
ಮೆತ್ತಾಗೆ ಮನವ ತೆರೆಯಲು,
ನುಗ್ಗಿತು ಎಂಥಾ ಹೊಂಬಿಸಿಲು!

ಮುಗಿಲಲಿ ಮೋಡ ಕವಿದಿದೆ
ತಂಗಾಳಿ ನುಗ್ಗಿ ಸುಳಿದಿದೆ
ಮನ ಹಿಗ್ಗಿ ಮೈಯ ಮುರಿದಿದೆ
ನಿಂಗೆ ಹೆಂಗನಿಸುತ್ತವ್ವಾ, ನಾ ಕೇಳಿದೆ

ಜಳಕದೀ ಹಾಡ ಬಿಟ್ಟು
ಚಂದಾದ ಬಟ್ಟೆ ತೊಟ್ಟು
ಹೊರಬಂದು ನೊಡಿದೆ ಕತ್ತೆತ್ತಿ
ಸೊಜಿಗವು ಇಂದೇನೋ ಐತಿ

ನಗು ಮೊಗದ ಶಾಲೆಯ ಮಕ್ಕಳು
ಮನಸೆಳೆವ ಈಕೆ ಬರುತಾಳು
ಮೈ ಚೆಲ್ಲಿ ನಿಂತಾವೆ ಮರಗಳು
ರಸದೌತಣ ಎಂದಿವೆ ಕಂಗಳು!

-ಚೇತನ್ ಪಿ
೨೩-೦೩-೨೦೦೫

Mar 2, 2005

ನಾ ಕಂಡ ದೈವ

ರವಿವಾರದ ಸಂಜೆಯೊಂದು
ಹೊರಟೆ ಸಿನಿಮಾ ನೋಡಲೆಂದು
ಸಾಲು ಸಲಾಗಿ ಜನ ನಿಂತಿರಲು
ಗೇಟಿನಾಚೆ ನಾ ಕಾಯುತಿರಲು
ಚಾಚಿತ್ತು ಒಂದು ಕೈ
ಎನೋ ಬೇಡಿತ್ತು ಆ ಕೈ

ಹತ್ತು ವರ್ಷದ ವಯಸು
ಹರಿದ ಮಾಸಿದ ಧಿರಿಸು
ಸೊಂಟದಲ್ಲೊಂದು ಕೂಸು
ಯೋಚಿಸಲಿಲ್ಲ ಮನಸು
ಕೈಗಿಟ್ಟೆ ನಾಲ್ಕು ಕಾಸು

ಸಿನಿಮಾ ಮರೆತಿದ್ದೆ
ಅವಳನೇ ನೋಡುತಲಿದ್ದೆ
ಕೊಂಡಳಿಷ್ಟು ತಿನಿಸು
ಬಯ್ಗಿಡಲು ನಕ್ಕಿತು ಕೂಸು

ನಗುತಲಿದ್ದಳು,
ನಗಿಸುತಲಿದ್ದಳು, ಮುತ್ತುಗರೆಯುತಿದ್ದಳು
ಅದೆಂಥ ಮಮತೆ! ವಾತ್ಸಲ್ಯದ ಒರತೆ
ಕುಲಕೆ ಕೀರ್ತಿ, ಇದ್ಯಾವ ಶಕ್ತಿ?
ಯಾರು ಕರುಣಿಸಿದ ವರದ ಪ್ರಾಪ್ತಿ?

ಕೈ ಮುಗಿದೆ,
ನಾ ಕಂಡ ಆ ದೈವಕೆ

-ಚೇತನ್ ಪಿ
೦೧/೦೩/೦೫