Sep 19, 2007

ಬೊಗಸೆಯಲ್ಲಿ ಮಳೆ

ಹೀಗೇ ಒಮ್ಮೆ 'interesting' ಎನಿಸಿ ’ಬೊಗಸೆಯಲ್ಲಿ ಮಳೆ’ ಕೊಂಡೆ. ಹತ್ತು ಪುಟಗಳನ್ನು ಓದುವಷ್ಟರಲ್ಲಿ ನಾನು ಜಯಂತರ ಅಭಿಮಾನಿಯಾಗಿ ಹೋಗಿದ್ದೆ.

ಕವಿ-ಕೃತಿ ಪರಿಚಯದಲ್ಲಿ ಹೇಳಿರುವಂತೆ, ಪ್ರತೀವಾರ "ಹಾಯ್ ಬೆಂಗಳೂರ್" ವಾರ ಪತ್ರಿಕೆಗೆ "ಬೊಗಸೆಯಲ್ಲಿ ಮಳೆ" ಶೀರ್ಷಿಕೆಯಲ್ಲಿ ಬರೆದ ನುಡಿನೋಟಗಳ ಸಮಗ್ರ ಸಂಕಲನ ಇದು.

ಏನಿದು ನುಡಿನೋಟ? - ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಓದಿ ಸ್ವತಃ ತಿಳಿಯುವಂಥದ್ದು. ಓದಿದ ನಂತರ ’ನುಡಿನೋಟ’ ವೆಂಬುದು ಎಷ್ಟು ಸಮರ್ಪಕ ಹೆಸರೆಂದು ನಿಮಗೇ ತಿಳಿಯುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನುಡಿನೋಟವು, ದೈನಿಕ ಆಗುಹೋಗುಗಳ ಸಣ್ಣ ವಿವರಗಳಲ್ಲಿ ಜಯಂತರು ತಮ್ಮ ಅನುಭವಗಳನ್ನು ಹೆಣೆದು ಕಟ್ಟಿಕೊಡುವ ಅಭಿವ್ಯಕ್ತಿಯ ಪ್ರಯತ್ನ; ಅವರ ಸುತ್ತಣ ಜಗತ್ತಿನ ಸೂಕ್ಷ್ಮ ಸವಿವರ ಚಿತ್ರಣ, ಭಾವುಕ ಅವಲೋಕನ. ಇಲ್ಲಿ ಕಾಲ್ಪನಿಕತೆಯಿಲ್ಲ. ಪೂರ್ವಾಗ್ರಹವಿಲ್ಲ, ಉತ್ಪ್ರೇಕ್ಷೆಗಳಿಲ್ಲ.

ರವಿ ಬೆಳಗೆರೆ ಹೇಳುವಂತೆ - ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಜಯಂತರು ಹೇಳಬಲ್ಲರು. ದೇಶ ಕಾಲಗಳಲ್ಲಿ ಸಂಚರಿಸುವ, ಪರಕಾಯ ಪ್ರವೇಶ ಮಾಡುವ ಅತಿಮಾನುಷನಂತೆ, ಅವರಿಗೆ ಫುಟ್‍ಪಾತ್‍ನಲ್ಲಿ ಸಿಲ್ವರ್ ಪೈಂಟ್ ಬಳಿದುಕೊಂಡು ನಿಲ್ಲುವ ಗಾಂಧಿ ಹುಡುಗನಿಗೆ ರಾತ್ರಿ ರಾತ್ರಿ ಗಾಳಿ ತೋರುವ ಮಮತೆ ಕಾಣುತ್ತದೆ. ಆಪರೇಷನ್ ಮುನ್ನ ಸಹಿ ಮಾಡುವ ಕರಾರು ಪತ್ರದ ನಿಯಮಗಳಲ್ಲಿ ಸೂತಕ ಛಾಯೆಯಿರುವುದು ಕಾಣುತ್ತದೆ. ’ಪಿಕ್‍ಪಾಕೆಟ್’ಗೊಂಡವನ ಆತ್ಮಸಾಕ್ಷಾತ್ಕಾರ ಕಾಣುತ್ತದೆ. ಎಲ್ಲವನ್ನು ಲೇಖಕನ ಛಾಯೆಯಿರದಂತೆ third person ನಿರೂಪಣೆಯಲ್ಲಿ ಬೆಚ್ಚನೆಯ ಸ್ಪರ್ಶದೊಂದಿಗೆ ಚಿತ್ರಿಸುತ್ತಾರೆ.

ಒಟ್ಟಿನಲ್ಲಿ, ಓದಿ ಮುಗಿವಾಗ, ಪುಸ್ತಕದಲ್ಲಿ ಬೆರಳಿಟ್ಟು ಮುಚ್ಚಿ, ಒಂದು ನಿಟ್ಟುಸಿರು ಬಿಟ್ಟಿರುತ್ತೇವೆ. ಕಣ್ಣು ಮುಚ್ಚಿಯೋ, ಎಲ್ಲೋ ದಿಟ್ಟಿಸಿಯೋ, ಒಂದು ಮಂಥನಕ್ಕೆ ಸಾಗಿರುತ್ತೇವೆ.

MUST READ.

[ಕನ್ನಡ ಓದಲು ಬಾರದ ಕನ್ನಡಿಗ ಮಿತ್ರರಿಗೆ ಓದಿ ಹೇಳಲು ಸಿದ್ಧ]

Sep 10, 2007

ಸಾಕು

ನೀ ಜನಿಸುವ
ಮೇರು ಗಿರಿ ಕಾನನಗಳ
ಮಲೆನಾಡಿನವನಲ್ಲ

ಎಡೆಯಿರದ
ಜೀವಗಳೊಡಲ
ಕಡಲ ತೀರದವನಲ್ಲ

ನೀನೊಲಿದು ನಗುವ
ಬಯಲಿನವನಲ್ಲ

ಗುಡುಗೇನು
ಸಿಡಿಲೇನು
ಬರೀ ಗಾಳಿಗೆ
ಕೊಂಬೆಗಳು ತೂಗಿ
ಎಲೆಗರಿಗಳದುರಿ
"ಓ ಮಳೆಯೆ?"
ಎನಿಸಿದರೆ ಸಾಕು.

Sep 8, 2007

ಆಕ್ಸಿಡೆಂಟ್ (ಗೋಕರ್ಣದಲ್ಲಿ ವರ್ಷಾರಂಭ - ೨)

ದಿಸೆಂಬರ್ 31ರ ಬೆಳದಿಂಗಳ ರಾತ್ರಿ. ಗೋಕರ್ಣದ ಓಂ ಬೀಚಿನಿಂದ ಹಿಂತಿರುಗುವಾಗ ಸುಮಾರು ಒಂದು ಘಂಟೆ. ನಾನು ಮುಂದಿನ ಸೀಟ್‍ನಲ್ಲಿ ಕುಳಿತೆ. ಸೋಮ ಡ್ರೈವಿಂಗ್. ಸ್ವಲ್ಪ ದೂರ ಸಾಗಿದಿದಂತೆ ಕಡಲ ಭೋರ್ಗರೆತ ಕ್ರಮೇಣ ಕ್ಷೀಣಿಸಿ, ನಿಶ್ಯಬ್ಧ ಆವರಿಸಿತ್ತು. ನಿರ್ಜನ ಪ್ರದೇಶ. ಸೋಮನ ದೃಷ್ಠಿ ರಸ್ತೆಯ ಮೇಲೆ ನೆಟ್ಟಿತ್ತು. ಅವ ಹೆಚ್ಚು ಮಾತನಾಡುವವನಲ್ಲ. ಹಿಂದೆಲ್ಲರೂ ನಿದ್ರೆಗಿಳಿಯುತ್ತಿದ್ದಾರೆ. ಒಳಗೂ, ಹೊರಗೂ ಮೌನ. ಕೇಳುತ್ತಿದ್ದು ಬರೀ ಇಂಜಿನ್ ಸದ್ದು, ಕಿಟಕಿಯಿಂದ ತೂರಿಬರುತ್ತಿದ್ದ ಗಾಳಿಯ ಆರ್ಭಟ.

ದೂರದಲ್ಲಿ ಒಂದರ ಪಕ್ಕದಲ್ಲೊಂದು ಜೋಡಿಸಿದಂತೆ ಕಾಣುತ್ತಿದ್ದ ಬೆಳಕಿನ ತುಣುಕುಗಳು ಕಾಣಿಸಿದವು. ಬೆಳದಿಂಗಳಿದ್ದುದರಿಂದ ಅದು ರೈಲಿನ ಬೋಗಿಗಳ ಕಿಟಕಿಗಳೆಂದು ಗುರುತು ಹಿಡಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ರೈಲು ನಮ್ಮ ದಿಕ್ಕಿಗೆ ಲಂಬವಾಗಿ ಚಲಿಸುತ್ತಿತ್ತು. ಆಗಾಗ ತಗ್ಗುಗಳಲ್ಲಿ ಅಥವಾ ಗುಡ್ಡಗಳ ಹಿಂದೆ ಮರೆಯಾಗಿ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಮುಂದಿನ ಕ್ಷಣಕ್ಕೆ ಅದು ಹೆಚ್ಚು ಸ್ಪಷ್ಟ. (ಅದೋ.. ಅದೊಂದು ಬೋಗಿಯ ಬಾಗಿಲಲ್ಲಿ ಯಾರೋ ನಿಂತಂತಿದೆ!) ಆ ಕಂಡು ಮರೆಯಾಗುವ ಕುತೂಹಲದಲ್ಲೇ ಅದರ ಚಲನೆಯಲ್ಲೇ ದೃಷ್ಠಿಯಿಟ್ಟಿದ್ದೆ. ರೈಲು ಅದೊಮ್ಮೆ ಸೈರನ್ ಕಂಠದಲ್ಲಿ ಕೂಗಿದಾಗಲೇ ಅದೆಷ್ಟು ಹತ್ತಿರಾಗಿತ್ತೆಂದು ಅರಿವಾಗಿದ್ದು. ನಿಶ್ಯಬ್ಧದ ನಡುವೆ ಒಮ್ಮೆಗೇ ಸೀಳಿ ಬಂದ ಸದ್ದಿಗೆ ಕೆಲವರಿಗೆ ಎಚ್ಚರಾಯಿತು. ಹತ್ತಿರದಲ್ಲೇ ಮುಂದೊಂದು ಕ್ರಾಸಿಂಗ್ ಗೇಟ್ ಕಾಣ ಸಿಗಬಹುದೆಂದು ಕಣ್ಣು ಸಣ್ಣ ಮಾಡಿ ದಾರಿಯುದ್ದಕ್ಕೂ ನೋಡಿದೆ. ಉಹ್ಞೂ. ಅಂದಾಜಿನ ಪ್ರಕಾರ, ಅದೇ ವೇಗದಲ್ಲೇ ಚಲಿಸಿದರೆ, ನಮ್ಮ ಸ್ಕಾರ್ಪಿಯೋ, ರೈಲಿಗೆ ಮೂತಿಯಿಡುವುದು ಖಚಿತವಾಗಿತ್ತು. ಇನ್ನೇನು 50ಮೀ ಅಷ್ಟೇ. ಎಲ್ಲರ ದೃಷ್ಠಿ ಸೋಮನ ಮೇಲೆ. ಇನ್ನೇನು ಗಾಡಿ ನಿಲ್ಲಿಸುತ್ತಾನೆ - ಅಂತ. ಆದರೆ ಅವ ಸ್ಪೀಡ್ ಇನ್ನೂ ಹೆಚ್ಚಿಸಿದ! what the?

"ಏಯ್ ಸೋಮ"
"ಟ್ರೈನ್ ಕಣೋ ಸೋಮ"

ಹಾ.. ಅಕ್ಸಿಡೆಂಟೇನಾಗಲಿಲ್ಲ. ಜಸ್ಟ್ ಮಿಸ್ಸೂ ಅಲ್ಲ! ರೈಲು ಓವರ್ ಬ್ರಿಡ್ಜ್ ಮೇಲೆ ಹೋಗಿತ್ತು.

ಕಿರುಚಿದ್ದು ಯಾರು? ಯಾರಿಗೆ ’ಎಲ್ಲ ಗೊತ್ತಿತ್ತು’ ಯಾರಿಗೆ ’ಏನೂ ಗೊತ್ತಿರಲಿಲ್ಲ’ ಎಂಬುದು ಇನ್ನೂ ವಿವಾದದಲ್ಲಿದೆ.