Aug 30, 2012

ಹಬ್ಬ

ಮೋಡಿಯ ಮಾಡನಿಟ್ಟು
ಸೌರ ತೇಜದ ಕಂಬಗಳ ನೆಟ್ಟು
ದೂರ ಸಾಗರದಿಂದ ತಂದ
ಮುತ್ತಿನ ಹಾಸಿಟ್ಟು
ಬಣ್ಣದ ಬಿಲ್ಲನು
ತೋರಣಕಿಟ್ಟು
ಹಸಿರುಸಿರ ಹಣತೆಯಿಟ್ಟು
ನಮ್ಮೆದೆಗೂಡನು ಬೆಚ್ಚಗಿಟ್ಟು
ಬಾನ ತಾಳ ಮೇಳಗಳ ನಡುವೆ
ಅಪೂರ್ವ ಸೃಷ್ಠಿಯ ಹಬ್ಬಕೆ
ಕರ್ತನು ವರುಷವೂ ಕೊಂಡಾಡುವನು!

Jul 1, 2012

ಕಾರ್ವಾಲೋ, ಮಿಸ್ ಸದಾರಮೆ, ರಂಗ ಶಂಕರ

ಸ್ವಲ್ಪವೂ ವೃತ್ತಿಪರತೆ ಇರದೆ ನಿರ್ಮಿಸಿದ ಕನ್ನಡದ ಸಿನಿಮಾ ನೋಡುವ ಬದಲು, ಒಳ್ಳೆ ನಾಟಕಗಳನ್ನು ನೋಡೋಣ ಅನ್ನಿಸಿತು. ಉತ್ತರ ಬೆಂಗಳೂರಿಗೆ ಶಿಫ್ಟ್ ಆದ ಮೇಲೆ ಇಲ್ಲಿದ್ದಾಗ ನೋಡಲಿಲ್ಲ ಅನ್ನೊ ಗಿಲ್ಟ್ ಕಡಿಮೆ ಆಗಲಿ ಎಂಬ ಉದ್ದೇಶವೂ ಇತ್ತು.

ಮೊದಲು ರಂಗಶಂಕರದಲ್ಲಿ ಕಾರ್ವಾಲೋ ನೋಡಿದೆ. ಕಾರ್ವಾಲೋ, ರಂಗಭೂಮಿಯ ಅಳವಡಿಕೆಗೆ ಅಷ್ಟು ಸೂಕ್ತ ಎನಿಸಲಿಲ್ಲ. ಕಾರ್ವಾಲೋ ಕೃತಿ ಓದದೆ ಹೋದರಂತೂ ನಾಟಕದ ಎಳೆ ಗೋಜಲೆನಿಸುವುದು. ಮಂದಣ್ಣನ ಬಹುಮುಖ ಪ್ರತಿಭೆ ಹಾಗೂ ಪಶ್ಚಿಮ ಘಟ್ಟಗಳ ವನ್ಯ ಜೀವಿಗಳ ನಿಘೂಢತೆ, ವಿಸ್ಮಯಗಳನ್ನು ತೋರುವ ಕಾರ್ವಾಲೋ ಪಾತ್ರ ಅಲ್ಪ ಸಮಯದಲ್ಲಿ, ಹಾಗೂ ರಂಗದ ಸೀಮಿತ ಸೌಕರ್ಯಗಳಲ್ಲಿ ಬಿಂಬಿಸುವುದು ಕಷ್ಟ ಎನಿಸಿತು. ಉಳಿದಂತೆ, ನಿರೂಪಣೆಯಲ್ಲಿ ಎಲ್ಲಿಯೂ ತಡೆಯಿರಲಿಲ್ಲ. ಕಡೆಯಲ್ಲಿ ಒಂದು ಪ್ರೊಜೆಕ್ಟರ್ ಬಳಸಿ ಹಾರುವ ಹಲ್ಲಿಯನ್ನು ತೋರಿದ್ದು ಉಚಿತವಾಗಿತ್ತು. ನಾಟಕದ ಹೈಲೈಟ್ ಆಗಿದ್ದಿದ್ದು - ಕಿರುತೆರೆಯ ಕಲಾವಿದ ’ವೆಂಕಟಾಚಲಯ್ಯ’ ನವರು. ಮಂದಣ್ಣನ ಮಾವನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಅದಕ್ಕೆ ತಕ್ಕಂತೆ ಮನತುಂಬಿದ ಚಪ್ಪಾಳೆಗಳೂ ಸಿಗುತ್ತಿದ್ದವು.

ಆನಂತರ ನೋಡಿದ ’ಸಮಷ್ಠಿ’ ತಂಡದ’ಮಿಸ್ ಸದಾರಮೆ’ ನಾಟಕವೂ ಚೆನ್ನಗಿತ್ತು. ಕಥೆಯ ಎಳೆಯಲ್ಲಿ ವಿಶೇಷತೆ  ಇಲ್ಲದಿದ್ದರೂ, ಕೆ.ವಿ.ಸುಬ್ಬಣ್ಣನವರು ಬರೆದ ನಾಟಕವನ್ನು ಈಗಿನ ಕಾಲಕ್ಕೆ ತಕ್ಕಂತೆ ಅಳವಡಿಸಲಾಗಿದೆ. ಸದಾರಮೆಯ ಗಂಡ ಎಲ್ಲ ಕಳೆದುಕೊಂಡು ಊರೂರು ಅಲೆಯುತ್ತ ರತ್ನಖಚಿತ ಕರವಸ್ತ್ರವೊಂದನ್ನು ರಾಜನೊಬ್ಬನ ಬಳಿ ಮಾರಲು ಬರುವಂಥಹ ಗಂಭೀರ ಪ್ರಸಂಗದ ನಡುವೆ, ರಾಜನು ಇದ್ದಕ್ಕಿದ್ದಂತೆ ’ಕರವಸ್ತ್ರ’ಎಂದು, ತನ್ನ ಮಾಡರ್ನ್ ಮಂತ್ರಿ, ನರಪೇತಲ ಬಂದೂಕುಧಾರಿ ಕಾವಲುಗಾರನ ಜೊತೆ ಕುಣಿದು ಕುಪ್ಪಳಿಸುವುದು ಆಭಾಸವೆನಿಸದೆ ಉಲ್ಲಾಸಕರವಾಗಿತ್ತು.  ಅಲ್ಲಿಂದ ಕೊನೆಯವರೆಗೂ ಒಂದು ಸಣ್ಣ ಹಾಸ್ಯದ ಎಳೆ, ಮುಖ್ಯ ಪ್ರಸಂಗಗಳ ನಡುವೆ ಸಾಗುತ್ತದೆ. ನಾಟಕದ ಮುಖ್ಯ ಪಾತ್ರಧಾರಿ ಸದಾರಮೆಯಿಂದ, ನರಪೇತಲ ಬಂದೂಕುಧಾರಿ ಕಾವಲುಗಾರನವರೆಗೆ, ಎಲ್ಲರ ಅಭಿನಯವೂ ಚೆನ್ನಗಿತ್ತು.

ರಂಗದಲ್ಲಿ, ಬೆಳಕು ಸಂಯೋಜನೆಯ ಪಾಲು ಹೆಚ್ಚು ಎಂದು ಕೇಳಿದ್ದೆ. ಇದರ ಬಗ್ಗೆ ಗಮನವಿದ್ದುದರಿಂದ, ಬೆಳಕಿನದೇ ಆದ ಒಂದು ಭಾಷೆ, ಅಭಿವ್ಯಕ್ತಿಯ ಅನುಭವವಾಯಿತು. ನಿರೂಪಣೆಯಲ್ಲಿ ಕೆಲವೆಡೆ, ರಂಗದಲ್ಲಿ / ಪಾತ್ರಗಳಲ್ಲಿ ತೋರಲಾಗದ ಕುಂದುಗಳನ್ಜು, ಬೆಳಕಿನಲ್ಲಿ ಸರಿದೂಗಿಸಬಹುದು. ಉದಾಹರಣೆಗೆ, ಈ ನಾಟಕದಲ್ಲಿ, ಕೆಲವೊಂದು ಸಂಧರ್ಭಗಳಲ್ಲಿ ಸ್ವಗತ ಸಂಭಾಷಣೆಗಳನ್ನು - ರಂಗವನ್ನು ಸಂಪೂರ್ಣ ಮಬ್ಬುಗೊಳಿಸಿ, ಪಾತ್ರವೊಂದರ ಮೇಲೇ ಬೆಳಕನ್ನು ಕೇಂದ್ರಿಕರಿಸಿ ತೋರಲಾಯಿತು.

ಆದರೆ ಎಲ್ಲಾ ನಾಟಕಗಳೂ ಚೆನ್ನಾಗಿರುತ್ತವೆಂದಲ್ಲ. ಕೆ.ಹೆಚ್. ಕಲಾ ಸೌಧದಲ್ಲಿ ’ಅಚಾನಕ್’ ಎಂಬ ನಾಟಕದಿಂದ ಅರ್ಧದಲ್ಲೇ ಎದ್ದು ಬರುವಂತಾಯಿತು.  ನಾಟಕದ ತಂಡದ/ಲೇಖಕರ/ಕೃತಿಗಳ ಪರಿಚಯವಿದ್ದಲ್ಲಿ ನೋಡಬಹುದು. ಇಲ್ಲದಿದ್ದರೆ, ಅಂತರ್ಜಾಲದಲ್ಲಿ ಸಿನಿಮಾಗಳಂತೆ, ನಾಟಕಗಳಿಗೆ ಸಾಕಷ್ಟು ವಿಮರ್ಶೆಗಳು ಸಿಗುವುದಿಲ್ಲ. ಹೀಗೆ ಬ್ಲಾಗ್ ಗಳಲ್ಲಿ ಅವರಿವರು ನಾಟಕಗಳ ವಿಮರ್ಶೆ / ಪರಿಚಯ ಮಾಡಿದರೆ, ಇನ್ನೂ ಹೆಚ್ಚಿನವರು ಒಳ್ಳೆ ನಾಟಕಗಳನ್ನು ಸವಿಯಬಹುದು.

May 30, 2010

ಪರಿಮಳದ ಜಾಡು

ನೆನಪಿನ ನೌಕೆ
ಸಾಲದು ಗೆಳತಿ
ನಿನ್ನೆದೆಯ ಲೋಕಕೆ!

ಪಯಣಿಸಲಿ ಹೇಗೆ,
ಕಂಗಳ ಕಾಂತಿಗೆ
ಸ್ಪರ್ಶದ ಮಿಂಚಿಗೆ
ಹುಚ್ಚೇರಿದೆ ಮನಕಡಲಿಗೆ

ಚಿಂತಿಸದಿರು ನೀ
ಉಸಿರಲಿ ಹಿಡಿದಿರುವೆ
ನಿನ್ನ ಪರಿಮಳವ;
ಕಂಪಿನ ಜಾಡನು ಹಿಡಿವೆ

ಒಲವಲಿ ಹೊಳೆಯುವ
ನಿನ್ನ ಕಣ್ ತಾರಾಗಣವ
ಅನುಸರಿಸಿ ಬರುವೆ!
ನಿನ್ನೆದೆಯ ಲೋಕಕೆ!

Sep 7, 2009

ಮುನ್ನ

ಪೂಜೆಗೆ ಕಾಯ್ ಒಡೆದು ಕೊಡುವ ಚಿಣ್ಣ,
ಜಗುಲಿಯ ಮೇಲೆ ನಿಂತು ಕಾಯುತಿರುವನು

ಹರಿದ ಬಟ್ಟೆ ತೊಟ್ಟವನು
ಕೊಳೆಯ ಮೈಯವನು
ಆದರೆ ತೇಜ ಕಂಗಳಲಿ ಸೆಳೆವನು
ಮಂತ್ರ ಸ್ಪರ್ಶದಲಿ ನುಡಿವನು

ಕೇರಿಯ ಹುಡುಗ;
ಹೆಸರೇನೆಂದು ಕೇಳಲು
’ಮುನ್ನ’ ಎಂದು ಹಿಂಜರಿದು ನುಡಿದು
ಕಾಣದಾದನು


Jul 19, 2009

ಓಂ ಬೀಚ್ ಟು ಕುಡ್ಲು ಬೀಚ್ (ಗೋಕರ್ಣದಲ್ಲಿ ವರ್ಷಾರಂಭ - ೩)

Dec 1, 2007 (ಅರ್ಧಕ್ಕೆ ಬಿಟ್ಟವುಗಳನ್ನೆಲ್ಲ ಪೂರ್ಣಗೊಳಿಸುವ ಸಂಕಲ್ಪದೊಂದಿಗೆ, ಎರೆಡು ವರ್ಷಗಳ ನಂತರ!)


ಬೆಳಿಗ್ಗೆ ೮ ರೊಳಗ್ಗೆ ಬೀಚ್ ತಲುಪಿದ್ವಿ. ನಾವು ಅಂದು ಕೊಂಡ ಹಾಗೆ ಬೀಚು ನಿರ್ಜನವಾಗಿತ್ತು. ಹಿಂದಿನ ರಾತ್ರಿ ಬೆಳದಿಂಗಳಲ್ಲಿ ಕತ್ತಲ ಅಗಾಧ ಒಡಲಿಂದ ಬೋರ್ಗರೆದು ನೊರೆಯಂತೆ ಬಂದು ದಡ ಬಡಿಯುತ್ತಿದ್ದ ಸಾಗರ ಶುಭ್ರ ಅಕಾಶದ ಬೆಳಕಿನಲ್ಲಿ ತನ್ನದೇ ಸ್ವಂತ ’ಓಷನ್ ಬ್ಲೂ’ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. (ಅ ಕ್ಷಣ ಆ ನೋಟ ನನ್ನ ಕಣ್ ಬಿಂಬದಲ್ಲಿ ಹೇಗೆ ಕಾಣುತ್ತಿರಬಹುದೆಂದು ಯೋಚಿಸುತ್ತಿದ್ದೆ!). ಅದಕ್ಕೆ ಹೊಂದುವಂತೆ ಹಸಿರಂಚಿನ ತೀರ ಬೆಳ್ಳಗೆ ಕೋರೈಸಿತ್ತು. ಶೂ ತೆಗೆದು ತಣ್ಣಗಿನ ಉಸುಕಿನಲ್ಲಿ ಹೂತು ಹೋಗುವಂತೆ ಹೆಜ್ಜೆ ಹಾಕುತ್ತಾ ಸವಿದೆವು. ಎಷ್ಟೋ ಹೊತ್ತು ಸಾಗರದೆದೆ ಉಬ್ಬುತ್ತಾ ಇಳಿಯುತ್ತಾ, ತೊರೆಗಳನ್ನು ದಡಕ್ಕೆ ದೂಕುವುದನ್ನೇ ನೋಡುತ್ತಾ ಕುಳಿತೆವು. ಭುವಿಯ ಜೀವಜಲವಾಗಿರುವಾಗ ’ಉಸಿರಾಟ’ದ ಕಲ್ಪನೆ ಉಚಿತವೆನಿಸಿತು.

[ಕೆಲವು ವಿದೇಶಿ ಮಹಿಳೆಯರು ಹಿಂದಿನ ರಾತ್ರಿ ಚೆಲ್ಲಿದ ಬೀರ್ ಬಾಟಲ್, ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸವನ್ನು ಹೆಕ್ಕಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದರು. ತಮ್ಮ ದೇಶವಲ್ಲವೆಂದು ಎಣಿಸದೆ ಶ್ರಮಾದಾನ ಮಾಡುತ್ತಿರುವ ಅವರ ಪ್ರಙ್ಞೆ, ಕಾಳಜಿ ಮೆಚ್ಚುವಂತದ್ದು].

ಆನಂತರ ಕೂಡ್ಲ ಬೀಚಿಗೆ ಹೋಗುವುದೆಂದಾಗಿ ಮೋಟಾರ್ ಚಾಲಿತ ದೋಣಿ ಹತ್ತಿದೆವು. ಅದೊಂದು ನೀಳ ದೋಣಿ. ನಡುವಿನಲ್ಲಿ ಇಬ್ಬರು ಕೂರಬಹುದಾದಷ್ಟು ಅಗಲ. ಹಿಂಬದಿಯಲ್ಲಿ ಒಬ್ಬನಿಗಷ್ಟೇ ಜಾಗ. ಅಲ್ಲಿ ಮೋಟಾರ್ ನಿರ್ದೇಶಿಸುತ್ತ ನಾವಿಕ ಕೂತಿದ್ದ. ಯಾವುದೇ ಲೈಫ್ ಜಾಕೆಟ್ ಇಲ್ಲದೆ ಹತ್ತಲು ಹೆದರಿಕೆಯಾದರೂ, ಜಾವಪಾಯವಾಗುವಂತ ಯಾವುದೇ ಸಂದರ್ಭ ಕಾಣದಿದ್ದರಿಂದ ಯೋಚಿಸಲಿಲ್ಲ. ಆದರೆ ತೀರದಿಂದ ಸುಮಾರು ದೂರ ಬಂದಾದ ಮೇಲೆ ಅಲೆಯ ಏರಿಳಿತ ದೋಣಿಯ ಅಳತೆಗಿಂತ ಸುಮಾರು ಪಟ್ಟಿದ್ದದ್ದು, ಶಾಕ್ ಸಹಿತ ಅನುಭವವಾಯಿತು. ದೋಣಿ ಮಗುಚುವುದನ್ನು ತಡೆಯುವಂತೆ, ನಾವು ವಿರುದ್ಧ ದಿಕ್ಕಿನಲ್ಲಿ ಬಾಗಿ ಏಕಾಗ್ರತೆಯಿಂದ ಬ್ಯಾಲೆನ್ಸ್ ಮಾಡುವ ಕಸರತ್ತೆಲ್ಲ ಸೀಕ್ರೆಟ್ ಆಗಿ ಮಾಡಿದೆವು. ಯಾರೊಬ್ಬರೂ ಮತಾಡುತ್ತಿಲ್ಲ. ನೋಡಿದರೆ, ಒಮ್ಮೆಗೇ ಸಮೀರ ಹಾಗೂ ಶರತ ದೋಣಿಯಲ್ಲಿದ್ದ ಎರೆಡು ಲೈಫ್ ಜಾಕೆಟ್‍ಗಳನ್ನು ಏರಿಸಿಕೊಂಡು ಬಿಟ್ಟಿದ್ದರು!

ಕುಡ್ಲ ಬೀಚಿನೆಡೆಗೆ ದೋಣಿ ತಿರುಗಿಸುವಷ್ಟರಲ್ಲಿ ಮೋಟರು ಆಫ್ ಆಗೋಯ್ತು! ಅದರಿಂದ ದೋಣಿ ಓಲಾಡುವುದು ಕಮ್ಮಿಯಾಗಿ ಸ್ಟೇಬಲ್ ಆಗಿದ್ದುದೊಂದೇ ಸಮಾಧಾನ. ಎಲ್ಲರೂ ತೀರದಿಂದ ಎಷ್ಟು ದೂರದಲ್ಲಿದ್ದೇವೆ, ಹತ್ತಿರದಲ್ಲಿ ಯಾವ ಬೋಟ್ ಇದೆ ಅಂತ ಅಂದಾಜು ಹಾಕುತ್ತಾ ಇದ್ದೆವು. ಯಾರಿಗೆ ಈಜು ಬರುತ್ತೆ ಅಂತ ಕೇಳಿದರೆ ಯರೂ ಮಾತಾಡ್ತಾ ಇಲ್ಲ. ಈ ನಡುವೆ ನಮ್ಮ ನಾವಿಕ ಮೋಟಾರ್ ಸ್ಟಾರ್ಟ್ ಮಾಡುವುದಕ್ಕೆ ಸರ್ಕಸ್ ಮಾಡ್ತಾ, ಅದ್ಯಾಕೋ ಅವನ ಅಸಿಸ್ಟೆಂಟ್‍ಗೆ ಆಳ ನೋಡಲು ಹೇಳಿದ. ದೋಣಿಯಷ್ಟೇ ಉದ್ದದ ಕೋಲೋಂದು ತಳದಲ್ಲಿಂದ ಎತ್ತಿ, ನೀರೊಳಗೆ ಇಳಿಸಿದ. ಅದು ಪೂರ್ತಿಯಾಗಿ ಒಳ ಹೋಗಿದ್ದನ್ನು ನೋಡಿ ಅವನೂ ಹೆದರಿಬಿಟ್ಟನೆಂದು ಅವನ ಮುಖ ಹೇಳುತ್ತಿತ್ತು. ಅಷ್ಟರಲ್ಲಿ ಮೋಟರ್ ಸ್ಟಾರ್ಟ್ ಆಯಿತು. ದಡವನ್ನು ಸಮೀಪಿಸುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಜೀವ ಬಂತಂದಾಗಿ, ಎಲ್ಲರ ದ್ವನಿ ಎತ್ತರವಾಗಿತ್ತು!


[ಥ್ಯಾಂಕ್ಸ್ ಟು ಸೋಮ. ಎಲ್ಲಾ ಸಮಯದಲ್ಲೂ ಕೂಲ್ ಆಗಿರದೇ ಇದ್ದರೆ ಈ ಫೋಟೋಗಳಿರುತ್ತಿರಲಿಲ್ಲ.]

ಒಂದಷ್ಟು ಚಿತ್ರಗಳು

ಕಳೆದ ಕೆಲವು ತಿಂಗಳುಗಳಲ್ಲಿ ನೋಡಿದ, ಒಳ್ಳೆಯ ಪುಸ್ತಕಗಳನ್ನೋದಿದಷ್ಟೇ ತೃಪ್ತಿಯಿತ್ತ ಕೆಲವು ಚಿತ್ರಗಳ ಸಮೀಕ್ಷೆಗಿಳಿಯದೆ, ಒಮ್ಮೆ ನೋಡಿ ಎಂದು ಆಗ್ರಹಿಸುತ್ತಾ ನಿಮ್ಮ ಮುಂದಿಡುತ್ತೇನೆ.

ಮೋಟಾರ್ ಸೈಕಲ್ ಡೈರೀಸ್.


ರೆಡ್ ಲೈಕ್ ದಿ ಸ್ಕೈ.


ದಿ ವಿಲ್ಲೊ ಟ್ರೀ.


ಕಲರ್ ಆಫ್ ಪಾರಾಡೈಸ್.


ಚಿಲ್ದ್ರನ್ ಆಫ್ ಹೆವನ್.


ಅಡ್ವೆಂಚರ್ಸ್ ಆಫ್ ಶೆರ್ಲಾಕ್ ಹೋಮ್ಸ್.(ಟೀವಿ ಸೀರೀಸ್)

ಈ ಸೀರಿಸ್ ಬಗೆಗಿನ ಅತ್ಯುತ್ತಮ ರಿವ್ಯೂ ಇಲ್ಲಿದೆ -